Defamation Case: ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪತ್ರಕರ್ತ Rajat Sharma
ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಗಿಣಿ ನಾಯಕ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ತಮಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಪತ್ರಕರ್ತ ರಜತ್ ಶರ್ಮಾ ಶುಕ್ರವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಶುಕ್ರವಾರ ದೆಹಲಿ ಹೈಕೋರ್ಟ್ ನಲ್ಲಿ ರಜತ್ ಶರ್ಮಾ ಪರ ವಕೀಲರು ಮಾನಹಾನಿ ಪ್ರಕರಣ ದಾಖಲಿಸಿದ್ದು, ಲೋಕಸಭೆ ಚುನಾವಣಾ ಫಲಿತಾಂಶ ದಿನದಂದು ನಡೆದ ಟಿವಿ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕರಾದ ರಾಗಿಣಿ ನಾಯಕ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ಮಾನಹಾನಿಕರವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಕ್ಷೇಪಾರ್ಹ ಟ್ವೀಟ್ಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದು, ಕೂಡಲೇ ಅವುಗಳನ್ನು ತೆಗೆದುಹಾಕಲು ಮತ್ತು ರಾಜಕೀಯ ನಾಯಕರು ರಜತ್ ಶರ್ಮಾ ಅವರ ವಿರುದ್ಧ ಆರೋಪ ಮಾಡುವುದನ್ನು ತಡೆಯಬೇಕು. ತಮ್ಮ ಕಕ್ಷೀದಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಈ ಮೊಕದ್ದಮೆಯು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ರಜಾಕಾಲದ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಅವರು ಶರ್ಮಾ ಪರವಾಗಿ ವಾದಗಳನ್ನು ಆಲಿಸಿದ ನಂತರ, ಮಧ್ಯಂತರ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದಾರೆ.
ಏನಿದು ಪ್ರಕರಣ?
ಲೋಕಸಭೆ ಚುನಾವಣಾ ಫಲಿತಾಂಶದ ದಿನದಂದು ಇಂಡಿಯಾ ಟಿವಿಯಲ್ಲಿ ನಡೆದ ಲೈವ್ ಚರ್ಚಾ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕಿ ಹಾಗೂ ಪಕ್ಷದ ವಕ್ತಾರೆ ರಾಗಿಣಿ ನಾಯಕ್ ಅವರು ಪತ್ರಕರ್ತ ರಜತ್ ಶರ್ಮಾ ತಮ್ಮನ್ನು ನಿಂದಿಸಿದ್ದಾರೆಂದು ಆರೋಪಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಟ್ವೀಟ್ ನಲ್ಲಿ “ಮೊದಲ ವೀಡಿಯೋವನ್ನು ನನ್ನ ಗಮನಕ್ಕೆ ಎಕ್ಸ್ ನಲ್ಲಿ ತರಲಾಗಿತ್ತು. ಇದರಲ್ಲಿ ರಜತ್ ಶರ್ಮಾ ಅವರು ನೇರ ಕಾರ್ಯಕ್ರಮದಲ್ಲಿ ನನ್ನನ್ನುದ್ದೇಶಿಸಿ ಕೆಟ್ಟ ಪದ ಬಳಸಿದ್ದಾರೆ.
ನಾನು ಮತ್ತೆ ಪರಿಶೀಲಿಸಿದ್ದು ಅದೇ ಚಾನಲ್ ಮೂಲಕ ವೀಡಿಯೋ ಪರಿಶೀಲಿಸಿದೆ. ಇದಕ್ಕಿಂತ ಕೆಳ ಮಟ್ಟಕ್ಕೆ ಪತ್ರಿಕೋದ್ಯಮ ಕುಸಿಯಬಹುದೇ? ನೀವೇನಾದರೂ ಉತ್ತರ ಹೊಂದಿದ್ದೀರಾ ರಜತ್ ಶರ್ಮ?” ಎಂದು ನಾಯಕ್ ಪೋಸ್ಟ್ ಮಾಡಿದ್ದರು.
ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿ “ರಜತ್ ಶರ್ಮಾ ಅವರು ಖ್ಯಾತ ಮಾಧ್ಯಮ ವ್ಯಕ್ತಿ. ಅವರು ಅವರದ್ದೇ ಆದ ರಾಜಕೀಯ ಒಲವುಗಳನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಮುಖ ವಕ್ತಾರೆಯೊಬ್ಬರಿಗೆ ಈ ರೀತಿಯ ಭಾಷೆ ಪ್ರಯೋಗ ಅಸ್ವೀಕಾರಾರ್ಹ ಮತ್ತು ಖಂಡನೀಯ. ಅವರು ಬೇಷರತ್ ಕ್ಷಮೆಯಾಚಿಸಬೇಕು,” ಎಂದು ಆಗ್ರಹಿಸಿದ್ದರು.
ಇದೀಗ ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಪತ್ರಕರ್ತ ರಜತ್ ಶರ್ಮಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ