ಕಾಂಚೀಪುರಂ: ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೆ ಅತ್ತ ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭೀತಿಗೆ ಕಾರಣವಾಯಿತು. ಶಾಲೆಗಳನ್ನು ಕೊಯಮತ್ತೂರಿನ ಪಿಎಸ್ ಬಿಬಿ ಮಿಲೇನಿಯಮ್ ಮತ್ತು ಕಾಂಚೀಪುರಂ ಜಿಲ್ಲೆಯ ಖಾಸಗಿ ಶಾಲೆ ಎಂದು ಗುರುತಿಸಲಾಗಿದೆ.
ಪಿಎಸ್ ಬಿಬಿ ಮಿಲೇನಿಯಂ ಶಾಲೆಗೆ ಭಾನುವಾರ ರಾತ್ರಿ ಇಮೇಲ್ ಬಂದಿದ್ದರೆ, ಸೋಮವಾರ ಬೆಳಗ್ಗೆ ಎರಡನೇ ಶಾಲೆಗೆ ಬೆದರಿಕೆ ಕರೆ ಮಾಡಲಾಗಿದೆ. ಮಾಹಿತಿ ಪಡೆದ ನಂತರ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಕ್ಷಣವೇ PSBB ಮಿಲೇನಿಯಮ್ ಶಾಲೆಗೆ ತಲುಪಿ ತನಿಖೆಯನ್ನು ಪ್ರಾರಂಭಿಸಿದರು. ಆದರೆ ಯಾವುದೇ ಸ್ಫೋಟಕ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮೇಲ್ ಕಳುಹಿಸಿದ ಮತ್ತು ಸುಳ್ಳು ಕರೆ ಮಾಡಿದವರನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ.
ಸದ್ಯ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಪೊಲೀಸರು ಶಾಲೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಕೂಲಂಕುಷವಾಗಿ ಪರಿಶೀಲಿಸದೆ ಯಾರನ್ನೂ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ.
Advertisement