ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಎನ್ ಮಣ್ಣ್, ಎನ್ ಮಕ್ಕಳ್ (ನನ್ನ ಭೂಮಿ, ನನ್ನ ಜನ) ಪಾದಯಾತ್ರೆಯ ಯಶಸ್ಸಿನ ಬಳಿಕ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತೆ ಸುದ್ದಿಯಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪಾಲ್ಗೊಳ್ಳುವಿಕೆ ಮೂಲಕ ಬೃಹತ್ ಪಾದಯಾತ್ರೆ ಕಾರ್ಯಕ್ರಮದ ಬಳಿಕ ಅಣ್ಣಾಮಲೈ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದು, ಬಿಜೆಪಿ ಕಾರ್ಯಕ್ರಮದ ಬಳಿಕ ಕಾರ್ಯಕ್ರಮ ನಡೆದ ಮೈದಾನದ ಬಳಿ ಅಣ್ಣಾಮಲೈ ಗಾಡಿಯಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯ ಬಳಿ ನಡೆಸಿರುವ ಸಂಭಾಷಣೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಬಿಜೆಪಿ ಸಮಾವೇಶದ ಬಳಿಕ ಗಣ್ಯರು ತೆರಳುತ್ತಿದ್ದಂತೆಯೇ ಅಲ್ಲಿಯೇ ಮೈದಾನದಲ್ಲಿ ಟೀ ಮಾರುತ್ತಿದ್ದ ವ್ಯಕ್ತಿಯ ಬಳಿ ತೆರಳಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಚಹಾ ಮಾರಾಟಗಾರನ ವ್ಯಾಪಾರಿ ತಂತ್ರಗಾರಿಕೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅಣ್ಣಾಮಲೈ ಹೊಗಳಿಸಿದ್ದಾರೆ. ಅವರ ಬಳಿ ಚಹಾ ಸವಿದ ಅಣ್ಣಾಮಲೈ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದು, ಇದನ್ನು ಡಿಜಿಟಲ್ ಇಂಡಿಯಾ ಪಾಲನೆ ಎಂದು ಶ್ಲಾಘಿಸಿದ್ದಾರೆ.
ಅಂತೆಯೇ ತಾವು ಕುಡಿದ ಟೀ ಕಪ್ ಅನ್ನು ಕೂಡ ಚಹಾ ಮಾರಾಟಗಾರ ಬ್ಯಾಗ್ ವೊಂದರಲ್ಲಿ ಸಂಗ್ರಹಿಸಿದ್ದು, ಸ್ವಚ್ಛ ಭಾರತ್ ಅಭಿಯಾನ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಟೀ ಕುಡಿದ ಅಣ್ಣಾಮಲೈ ಕೊಟ್ಟ ಹಣ ಎಷ್ಟು ಗೊತ್ತಾ?
ಇನ್ನು ಟೀ ಕುಡಿದ ಬಳಿಕ ಯುಪಿಐ ಮೂಲಕ ಹಣ ಪಾವತಿಸಿದ ಅಣ್ಣಾಮಲೈ ಚಹಾ ಮಾರಾಟಗಾರರ ಹುಟ್ಟಿದ ವರ್ಷದ ಸಂಖ್ಯೆ ಅಂದರೆ 1978ರೂ.ವನ್ನು ಪಾವತಿಸಿದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement