ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಒಂದು ರಾಷ್ಟ್ರ, ಒಂದು ಚುನಾವಣೆ ಅಂತಿಮ ವರದಿ ಸಲ್ಲಿಕೆ!

ಆಯೋಗವು 2029 ರ ವೇಳೆಗೆ ಏಕಕಾಲದಲ್ಲಿ ಪೂರ್ಣ ಪ್ರಮಾಣದ ಮತದಾನಕ್ಕೆ ಅನುಕೂಲವಾಗುವಂತೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಮಾರ್ಚ್ ಮಧ್ಯದ ವೇಳೆಗೆ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ. ಇದರ ನಡುವೆಯೇ 22ನೇ ಕಾನೂನು ಆಯೋಗವು ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ಅಂತಿಮ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ನಿವೃತ್ತ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರ ನೇತೃತ್ವದ ಆಯೋಗವು ಏಕಕಾಲಕ್ಕೆ ಚುನಾವಣೆ ನಿಟ್ಟಿನಲ್ಲಿ ನೂತನ ಅಧ್ಯಾಯ ಅಥವಾ ಭಾಗ ಸೇರಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ಶಿಫಾರಸು ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಆಯೋಗವು 2029 ರ ವೇಳೆಗೆ ಏಕಕಾಲದಲ್ಲಿ ಪೂರ್ಣ ಪ್ರಮಾಣದ ಮತದಾನಕ್ಕೆ ಅನುಕೂಲವಾಗುವಂತೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಪ್ರಜಾಪ್ರತಿನಿಧಿ ಕಾಯಿದೆ, 1951 ರ ತಿದ್ದುಪಡಿಗಳ ಜೊತೆಗೆ, ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ರಚಿಸಲು ಸಮಿತಿಯು ಸೂಚಿಸುವ ಸಾಧ್ಯತೆಯಿದೆ.

ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಹೆಚ್ಚಿನ ಸಲಹೆಗಳನ್ನು ಅಂಗೀಕರಿಸಿದೆ ಮತ್ತು ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳ ಪರವಾಗಿಯೂ ಇದೆ ಎಂದು ತಿಳಿದುಬಂದಿದೆ.

ಸಂವಿಧಾನದ ಹೊಸ ಅಧ್ಯಾಯವು, ಲೋಕಸಭೆ, ರಾಜ್ಯಗಳ ವಿಧಾನಸಭೆಗಳು, ಪಂಚಾಯ್ತಿಗಳು ಮತ್ತು ಪುರಸಭೆಗಳಿಗೆ ಏಕಕಾಲಕ್ಕೆ ಚುನಾವಣೆ, ಏಕಕಾಲಕ್ಕೆ ಚುನಾವಣೆಯ ಸುಸ್ಥಿರತೆ ಮತ್ತು ಸಾಮಾನ್ಯ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿರಲಿದೆ. ಇದರಿಂದ 2029ರ ಮಧ್ಯ ಭಾಗದಲ್ಲಿ ಮೂರು ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ
'ಒಂದು ರಾಷ್ಟ್ರ ಒಂದು ಚುನಾವಣೆ', ಡಿಲಿಮಿಟೇಶನ್ ವಿರುದ್ಧ ನಿರ್ಣಯ ಮಂಡಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ 

ಒಂದು ವೇಳೆ ಅವಿಶ್ವಾಸ ಮತದಿಂದ ಸರ್ಕಾರ ಪತನವಾದರೆ ಅಥವಾ ಸಮ್ಮಿಶ್ರ ಸರ್ಕಾರ ಇದ್ದರೆ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ "ಏಕತ್ವ ಸರ್ಕಾರ" ವನ್ನು ಅನ್ವೇಷಿಸಬಹುದು ಎಂದು ಸಮಿತಿಯು ಸೂಚಿಸಬಹುದು. ಏಕೀಕೃತ ಸರ್ಕಾರದ ಸೂತ್ರವು ವಿಫಲವಾದಲ್ಲಿ, ಸದನದ ಉಳಿದ ಅವಧಿಗೆ ಹೊಸದಾಗಿ ಚುನಾವಣೆ ನಡೆಸಲು ಆಯೋಗವು ಸೂಚಿಸಬಹುದು. ಸಮಿತಿಯು ಸಾಮಾನ್ಯ ಮತದಾರರ ಪಟ್ಟಿಗೆ ಸಾಂವಿಧಾನಿಕ ತಿದ್ದುಪಡಿಯನ್ನು ಸಹ ಪ್ರಸ್ತಾಪಿಸಬಹುದು ಎಂದು ತಿಳಿಸಲಾಗಿದೆ.

ಆಯೋಗದ ಶಿಫಾರಸುಗಳು 21 ನೇ ಕಾನೂನು ಆಯೋಗದ ವರದಿಗೆ ಅನುಗುಣವಾಗಿರುತ್ತವೆ, ಇದು ಏಕಕಾಲದಲ್ಲಿ ಚುನಾವಣೆಗಳು ಸಾರ್ವಜನಿಕ ಹಣವನ್ನು ಉಳಿಸುತ್ತದೆ, ಆದರೆ ಸಂವಿಧಾನದ ಅಸ್ತಿತ್ವದಲ್ಲಿರುವ ಚೌಕಟ್ಟಿನೊಳಗೆ ಸಾಧ್ಯವಿಲ್ಲ ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ
'ಒಂದು ರಾಷ್ಟ್ರ, ಒಂದು ಗುರುತು ಪತ್ರ': ಪ್ರಯೋಜನ, ನ್ಯೂನತೆಗಳ ಬಗ್ಗೆ ತಜ್ಞರ ಅಭಿಮತ

21 ನೇ ಕಾನೂನು ಆಯೋಗವು ಅತಂತ್ರ ಸಂಸತ್ತು ವಿಧಾನಸಭೆಯ ಸಂದರ್ಭದಲ್ಲಿ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸದನದ ಬೆಂಬಲ ಪಡೆಯುವ ಸರ್ಕಾರ ಸ್ಥಾಪಿಸಬೇಕು, ಅವರ ಚುನಾವಣಾ ಪೂರ್ವ ಅಥವಾ ನಂತರದ ದೊಡ್ಡ ಪಕ್ಷಕ್ಕೆ ಅವಕಾಶವನ್ನು ನೀಡಬೇಕು ಎಂದು ಸಲಹೆ ನೀಡಿದೆ. ಇನ್ನೂ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿಗಳು ಸರ್ವಪಕ್ಷ ಸಭೆ ಕರೆಯಬಹುದು. ಮೇಲಿನ ಆಯ್ಕೆಗಳು ವಿಫಲವಾದರೆ, ಮಧ್ಯಂತರ ಚುನಾವಣೆಗಳನ್ನು ಘೋಷಸಬೇಕು ಎಂದು ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com