ಹೈದರಾಬಾದ್: ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪೀಠಾಪುಂರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತೆಲುಗಿನ ಜನಪ್ರಿಯ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ. ಇಂದು ನಡೆದ ಪಕ್ಷದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಮುಂಬರುವ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ, ಟಿಡಿಪಿಯೊಂದಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ ಒಂದು ದಿನದ ನಂತರ ಪವನ್ ಕಲ್ಯಾಣ್ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕ್ರಿಯಾಶೀಲ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ, ದೇಶದ ಪ್ರಗತಿ ಮತ್ತು ಆಂಧ್ರಪ್ರದೇಶದ ರಾಜ್ಯ, ಜನರ ಉನ್ನತಿಗಾಗಿ ಬಿಜೆಪಿ, ಟಿಡಿಪಿ ಮತ್ತು ಜೆಎಸ್ಪಿ ಬದ್ಧವಾಗಿದ್ದು, ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಮೂರು ಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಪ್ರಧಾನಿ ಮೋದಿ ಕಳೆದ 10 ವರ್ಷಗಳಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಮತ್ತು ಟಿಡಿಪಿ ಮತ್ತು ಜೆಎಸ್ಪಿಯೊಂದಿಗೆ ಬಿಜೆಪಿ ಒಗ್ಗೂಡುವುದರಿಂದ ಆಂಧ್ರಪ್ರದೇಶದ ಜನರ ಆಶೋತ್ತರಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಬಿಜೆಪಿ ಮತ್ತು ಟಿಡಿಪಿ ಬಹಳ ಹಳೆಯ ಸಂಬಂಧವನ್ನು ಹೊಂದಿವೆ. ಟಿಡಿಪಿ 1996 ರಲ್ಲಿ ಎನ್ಡಿಎಗೆ ಸೇರ್ಪಡೆಗೊಂಡಿತು ಮತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳಲ್ಲಿ ಯಶಸ್ವಿಯಾಗಿ ಒಟ್ಟಿಗೆ ಕೆಲಸ ಮಾಡಿದೆ ಎಂದು ತಿಳಿಸಲಾಗಿದೆ. 2014 ರಲ್ಲಿ, ಟಿಡಿಪಿ ಮತ್ತು ಬಿಜೆಪಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟಾಗಿ ಹೋರಾಡಿದರೆ, ಜೆಎಸ್ಪಿ 2014 ರ ಸಾರ್ವತ್ರಿಕ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬೆಂಬಲ ನೀಡಿತ್ತು.
Advertisement