ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಆರು ಚುನಾವಣಾ ಭರವಸೆಗಳನ್ನು ಘೋಷಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಮತ್ತು ದೇಶದ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ನೀಡುವುದು ಸೇರಿದಂತೆ ಆರು ಭರವಸೆಗಳನ್ನು ನೀಡಿದ್ದಾರೆ. ಕೇಜ್ರಿವಾಲ್ ಅವರ ಸಂದೇಶವನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಓದಿದರು.
'ಲೋಕತಂತ್ರ ಬಚಾವೋ' ಅಥವಾ 'ಪ್ರಜಾಪ್ರಭುತ್ವ ಉಳಿಸಿ' ಎಂಬ ಹೆಸರಿನ ಇಂಡಿಯಾ ಮೈತ್ರಿಕೂಟದ ರ್ಯಾಲಿಯು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಫಾರೂಕ್ ಅಬ್ದುಲ್ಲಾ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರ ಒಳಗೊಳ್ಳುವಿಕೆಗೆ ಸಾಕ್ಷಿಯಾಯಿತು.
ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ತಮ್ಮ ಪತಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ರವನ್ನು ಸುನೀತಾ ಕೇಜ್ರಿವಾಲ್ ಅವರು ಓದಿದರು.
'ನನ್ನ ಪ್ರೀತಿಯ ಭಾರತೀಯರೇ, ನೀವೆಲ್ಲರೂ ದಯವಿಟ್ಟು ನಿಮ್ಮ ಈ ಮಗನ ಶುಭಾಶಯಗಳನ್ನು ಸ್ವೀಕರಿಸಿ. ನಾನು ಮತ ಕೇಳುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಯಾರನ್ನೂ ಸೋಲಿಸುವ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತವನ್ನು ನವ ಭಾರತ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ದೇಶವು ಎಲ್ಲವನ್ನೂ ಹೊಂದಿದೆ. ನಾನು ಜೈಲಿನಲ್ಲಿದ್ದೇನೆ, ಇಲ್ಲಿ ನನಗೆ ಯೋಚಿಸಲು ಸಾಕಷ್ಟು ಸಮಯ ಸಿಗುತ್ತಿದೆ. ಭಾರತ ಮಾತೆಯ ಬಗ್ಗೆ ಯೋಚಿಸುತ್ತಿದ್ದೇನೆ, ಜನರಿಗೆ ಉತ್ತಮ ಶಿಕ್ಷಣ ಸಿಗದಿದ್ದಾಗ, ಸರಿಯಾದ ಚಿಕಿತ್ಸೆ ಇಲ್ಲದಿರುವಾಗ, ವಿದ್ಯುತ್ ಕಡಿತ ಸಂಭವಿಸಿದಾಗ, ರಸ್ತೆಗಳು ಹಾಳಾದಾಗ ಭಾರತ ಮಾತೆ ನೋವಾಗುತ್ತದೆ' ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.
ಜೈಲು ಪಾಲಾಗಿರುವ ಅರವಿಂದ್ ಕೇಜ್ರಿವಾಲ್ ನೀಡಿದ ಆರು ಚುನಾವಣಾ ಭರವಸೆಗಳು
ರಾಷ್ಟ್ರದಾದ್ಯಂತ 24x7 ವಿದ್ಯುತ್ ಪೂರೈಕೆ.
ದೇಶದಾದ್ಯಂತ ಬಡವರಿಗೆ ಉಚಿತ ವಿದ್ಯುತ್ ಒದಗಿಸುವುದು.
ಪ್ರತಿ ಗ್ರಾಮ ಮತ್ತು ನೆರೆಹೊರೆಯಲ್ಲಿ ಅತ್ಯುತ್ತಮ ಸರ್ಕಾರಿ ಶಾಲೆಗಳನ್ನು ನಿರ್ಮಿಸುವುದು
ಸರಿಯಾದ ಮತ್ತು ಉಚಿತ ಚಿಕಿತ್ಸೆಗಾಗಿ ಮೊಹಲ್ಲಾ ಕ್ಲಿನಿಕ್ಗಳು ಮತ್ತು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವುದು.
ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ರೈತರಿಗೆ ಎಂಎಸ್ಪಿ ಖಾತರಿ ನೀಡುವುದು.
ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವುದು.
ದೆಹಲಿ ಸಚಿವ ಗೋಪಾಲ್ ರೈ ಮಾತನಾಡಿ, 'ಲೋಕತಂತ್ರ ಬಚಾವೋ' ರ್ಯಾಲಿಯನ್ನು ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನೀತಿಗಳನ್ನು ರಕ್ಷಿಸುವ ಅಂತಿಮ ಅವಕಾಶ ಎಂದು ಹೇಳಿದರು.
ರ್ಯಾಲಿಯು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ರಕ್ಷಿಸುವ ಸಂಘಟಿತ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
Advertisement