ಹೈದ್ರಾಬಾದ್: ಹೈದ್ರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೈಕೋರ್ಟ್ ಗೆ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಆತ ದಲಿತನೇ ಅಲ್ಲ. ತನ್ನ ನಿಜವಾದ ಜಾತಿಯ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಸೈಬರಾಬಾದ್ ಪೊಲೀಸರು, ರೋಹಿತ್ ವೇಮುಲ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 2016ರಲ್ಲಿ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು.
ರೋಹಿತ್ ವೇಮುಲಗೆ ತಾನು ಪರಿಶಿಷ್ಟ ಜಾತಿಗೆ ಸೇರಿದವನಲ್ಲ ಎಂಬುದು ಗೊತಿತ್ತು. ತನ್ನ ತಾಯಿ ತನಗೆ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಮಾಡಿಸಿ ಕೊಟ್ಟಿರುವುದು ಆತನಲ್ಲಿ ಭಯ ಹುಟ್ಟಿಸಿತ್ತು. ತನ್ನ ನಿಜ ಜಾತಿಯ ಬಗ್ಗೆ ಸಹಪಾಠಿಗಳಿಗೆ ಗೊತ್ತಾದರೆ ಗೌರವ ಹಾಳಾಗುತ್ತದೆ ಎಂಬ ಭಯ ಕಾಡಿತ್ತು. ಜೊತೆಗೆ ಓದಿನಲ್ಲಿಯೂ ವೇಮುಲ ಹಿಂದೆ ಉಳಿದಿದ್ದ. ಹೀಗಾಗಿ, ಮೃತನಿಗೆ ಹಲವಾರು ಸಮಸ್ಯೆಗಳಿದ್ದವು, ಅದು ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿವೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
2016ರ ಜನವರಿ 17ರಂದು ವೇಮುಲ ಮೃತಪಟ್ಟಾಗ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಗುರಿ ಮಾಡಿತ್ತು. ಮುಖ್ಯವಾಗಿ ಸಚಿವೆ ಸ್ಕೃತಿ ಇರಾನಿ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಈಗ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
Advertisement