ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸುವ ಮುನ್ನ ರಾಮಮಂದಿರಕ್ಕೆ ತೆರಳಿ, ರಾಮಲಲ್ಲಾನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
"ಜನವರಿ 22 ರಂದು ನಡೆದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಮೊದಲ ಬಾರಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಮಲಲ್ಲಾನ ದರ್ಶನ ಪಡೆದರು ಎಂದು ವಿಎಚ್ಪಿ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಪ್ರವೇಶ ದ್ವಾರಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಹಳದಿ ದಳಗಳಿಂದ ರೂಪುಗೊಂಡ 'ಓಂ'. ಹೂವುಗಳನ್ನು ಬಳಸಿ ಮಾಡಿದ ಬಿಲ್ಲು ಮತ್ತು ಬಾಣದ ಪ್ರತಿಕೃತಿಗಳು ಸಹ ವಿವಿಧೆಡೆ ಕಂಡುಬಂದವು.
ಪ್ರಧಾನಿ ಮೋದಿ ಬಾಲರಾಮನ ದರ್ಶನ ಪಡೆದ ನಂತರ ರಾತ್ರಿ 7:15 ರ ಸುಮಾರಿಗೆ ಎರಡು ಕಿಮೀ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯ ಫೈಜಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ಅವರು ಪ್ರಧಾನಿ ಜೊತೆಗಿದ್ದರು.
ಅಯೋಧ್ಯೆ ಜಿಲ್ಲೆಗೆ ಒಳಪಡುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಮೇ 20 ರಂದು ಐದನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
Advertisement