ಮುಂಬೈ: ಇಂಡಿಯಾ ಒಕ್ಕೂಟ (INDIA Alliance) ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪಟೋಲೆ, 'ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಅಯೋಧ್ಯೆಯ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ. ಶಂಕರಾಚಾರ್ಯರು (Shankaracharya Peeth) ಇದರ ಪಾವಿತ್ರ್ಯವನ್ನು ವಿರೋಧಿಸಿದ್ದು ನಿಮಗೆ ಗೊತ್ತೇ ಇದೆ. ಆದ್ದರಿಂದ, ನಾಲ್ವರು ಶಂಕರಾಚಾರ್ಯರು ರಾಮಮಂದಿರವನ್ನು ಶುದ್ಧೀಕರಿಸುತ್ತಾರೆ. ಸರಿಯಾದ ಸ್ಥಳದಲ್ಲಿ ರಾಮದರ್ಬಾರ್ ಸ್ಥಾಪಿಸಲಾಗುವುದು ಎಂದು ಹೇಳಿದರು. ಅಲ್ಲಿ ಪ್ರತಿಷ್ಠಾಪಿಸುವುದು ಭಗವಾನ್ ರಾಮನ ವಿಗ್ರಹವಲ್ಲ, ಆದರೆ ರಾಮಲಾಲಾ ಮಗುವಿನ ರೂಪ. ರಾಮ ಮಂದಿರ ನಿರ್ಮಾಣದಲ್ಲಿ ನರೇಂದ್ರ ಮೋದಿ (Narendra Modi) ಶಿಷ್ಟಾಚಾರಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಅದನ್ನು ಸುಧಾರಿಸಿ ಧರ್ಮದಡಿ ಕೆಲಸ ಮಾಡುತ್ತೇವೆ ಎಂದರು.
ಇಂಡಿಯಾ ಒಕ್ಕೂಟದ ವಿರುದ್ಧ ಯುಪಿ ಸಿಎಂ ಯೋಗಿ ವಾಗ್ದಾಳಿ
ಇದೇ ವೇಳೆ ರಾಮಮಂದಿರ ನಿರ್ಮಾಣದ ಔಚಿತ್ಯವನ್ನು ಪ್ರಶ್ನಿಸುವವರ ವಿರುದ್ಧ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ವಾಗ್ದಾಳಿ ನಡೆಸಿದರು. ಭಯೋತ್ಪಾದಕರಿಗಾಗಿ ಕಾರ್ಖಾನೆಗಳನ್ನು ನಡೆಸುತ್ತಿರುವವರಿಗೆ ರಾಮಮಂದಿರದ ಬಗ್ಗೆ ಕೆಟ್ಟ ಭಾವನೆ ಬರುತ್ತದೆ ಎಂದು ಹೇಳಿದರು. ಇಂದಿನ ಪ್ರತಿಪಕ್ಷಗಳು ಸರ್ಕಾರದಲ್ಲಿದ್ದಾಗ ರಾಮಜನ್ಮಭೂಮಿ ಮೇಲೆ ಭಯೋತ್ಪಾದಕರ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೆ, ಇಂದು ದೇಶಕ್ಕೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಕೆಲ ದಿನಗಳ ಹಿಂದೆಯಷ್ಟೇ ನಾನಾ ಪಟೋಲೆ ಬಿಜೆಪಿಯನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ್ದರು. ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ಮೂಲಕ ಜನರನ್ನು ಲೂಟಿ ಮಾಡಿದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ದೇಶವನ್ನು ಹಾಳು ಮಾಡಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶವಿದ್ದು, ಹೀಗಾಗಿ ಬಿಜೆಪಿ ಸೋಲು ಖಚಿತ ಎಂದು ಪಟೋಲೆ ಹೇಳಿದರು. 'ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಟೀಕಿಸುವ ಬದಲು ಬಿಜೆಪಿ ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಸುಧಾರಿಸಲು ಏನು ಕ್ರಮ ಕೈಗೊಂಡಿದೆ ಎಂಬುದನ್ನು ಹೇಳಬೇಕು' ಎಂದರು.
Advertisement