ನಾನ್ಯಾವತ್ತೂ ಹಿಂದೂ-ಮುಸ್ಲಿಂ ಎಂದಿಲ್ಲ, ಈದ್ ದಿನ ಮುಸ್ಲಿಂ ಕುಟುಂಬಗಳಿಂದ ಬಂದ ಊಟ ಮಾಡುತ್ತಿದ್ದೆವು: ವಿವಾದಕ್ಕೆ ಪ್ರಧಾನಿ ಮೋದಿ ಸ್ಪಷ್ಟನೆ

ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ. ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದರೆ ಅದು ಮುಸ್ಲಿಮರೇ ಎಂದು ಅರ್ಥೈಸಿಕೊಳ್ಳುವುದೇಕೆ? ನಾನು ಯಾವಾಗ ಹಿಂದೂ ಮತ್ತು ಮುಸ್ಲಿಂ ಎಂದು ಭೇದಭಾವದ ರಾಜಕೀಯ ಮಾಡುತ್ತೇನೋ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ. ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದರೆ ಅದು ಮುಸ್ಲಿಮರೇ ಎಂದು ಅರ್ಥೈಸಿಕೊಳ್ಳುವುದೇಕೆ? ನಾನು ಯಾವಾಗ ಹಿಂದೂ ಮತ್ತು ಮುಸ್ಲಿಂ ಎಂದು ಭೇದಭಾವದ ರಾಜಕೀಯ ಮಾಡುತ್ತೇನೋ ಅಂದಿನಿಂದ ನನಗೆ ಸಾರ್ವಜನಿಕ ಕ್ಷೇತ್ರದಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನವರು ನಿಮ್ಮ ಚಿನ್ನ ಮತ್ತು ಆಸ್ತಿಯನ್ನು ಹೆಚ್ಚು ಮಕ್ಕಳಿರುವವರಿಗೆ ನೀಡಲು ಹವಣಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿದ್ದು, ಹೇಳಿಕೆ ಸಂಬಂಧ ಮೋದಿಯವರು ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಮೋದಿಯವರು ವಿವಾದ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.

ನಾನು ವೋಟ್​ ಬ್ಯಾಂಕ್​ ರಾಜಕಾರಣ ಮಾಡಲು ಇಲ್ಲಿ ಬಂದಿಲ್ಲ, ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್ ಎಂದು ಎಲ್ಲಾ ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವುದೇ ನನ್ನ ಗುರಿ. ಆದರೂ, ನನ್ನ ಮೇಲಿನ ಆಪಾದನೆ ಕೇಳಿ ಬಂದಾಗ ನನಗೆ ಆಘಾತವಾಯಿತು. ಹೆಚ್ಚು ಮಕ್ಕಳನ್ನು ಹೊಂದಿರುವವರ ಬಗ್ಗೆ ನಾನು ಮಾತನಾಡಿದಾಗ ನಾನು ಮುಸ್ಲಿಮರ ಬಗ್ಗೆಯೇ ಮಾತನಾಡುತ್ತಿದ್ದೇನೆಂದು ನಿಮಗೆ ಹೇಳಿದವರು ಯಾರು?

ಪ್ರಧಾನಿ ನರೇಂದ್ರ ಮೋದಿ
ಮನೆಯೂ ಇಲ್ಲ, ಕಾರೂ ಇಲ್ಲ; 10 ವರ್ಷ ಪ್ರಧಾನಿಯಾಗಿರುವ ಮೋದಿ ಘೋಷಿಸಿಕೊಂಡ ಆಸ್ತಿ ಎಷ್ಟು?

ಇಂತಹ ಪರಿಸ್ಥಿತಿ ಎಲ್ಲ ಬಡ ಕುಟುಂಬಗಳಲ್ಲೂ ಇದೆ. ಸಾಮಾಜಿಕ ವರ್ತುಲಗಳ ಹೊರತಾಗಿ ಎಲ್ಲಿ ಬಡತನ ಇರುತ್ತದೋ ಅಲ್ಲಿ ಸಹಜವಾಗಿ ಹೆಚ್ಚು ಮಕ್ಕಳಿರುತ್ತಾರೆ. ಅದು ಹಿಂದೂವೋ ಅಥವಾ ಮುಸ್ಲಿಂ ಎಂದೋ ನಾನು ಎಲ್ಲೂ ಹೇಳಿಲ್ಲ. ಯಾರಿಗೆ ಎಷ್ಟು ಮಕ್ಕಳನ್ನು ಸಾಕಲು ಸಾಧ್ಯವೋ ಅಷ್ಟು ಮಕ್ಕಳನ್ನು ಮಾತ್ರ ಹೊಂದಬೇಕು ಎಂದು ನಾನು ಹೇಳಿದ್ದೇನೆ. ಸರ್ಕಾರವೇ ಮಕ್ಕಳನ್ನು ಸಾಕುವ ಪರಿಸ್ಥಿತಿ ತರಬೇಡಿ ಎಂದು ಹೇಳಿದ್ದೇನೆ ಹೊರತು ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಇದೇ ವೇಳೆ 2002ದಲ್ಲಿ ತಾವು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಡೆದ ಗೋಧ್ರಾ ಘಟನೆಯನ್ನು ಉಲ್ಲೇಖಿಸಿದ ಅವರು, ಈ ಘಟನೆ ಬಳಿಕ ನನ್ನ ವಿರೋಧಿಗಳನ್ನು ನನ್ನನ್ನು ಮುಸ್ಲಿಂ ವಿರೋಧಿ ಎಂದು ಕತೆ ಕಟ್ಟಿದ್ದಾರೆ. ಇದು ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ. ಮೋದಿ ಮುಸ್ಲಿಮರಿಗಾಗಿ ಏನನ್ನೇ ಮಾಡಿದರೂ ಅದು, ಇದು ಎಂದು ಮಾತನಾಡುವವರು ಇದ್ದಾರೆ.

ನನ್ನ ಮನೆಯ ಸುತ್ತಮುತ್ತ ಬಹಳಷ್ಟು ಮುಸ್ಲಿಮರ ಕುಟುಂಬಗಳಿವೆ. ನಮ್ಮ ಮನೆಯಲ್ಲಿ ಈದ್ ಸೇರಿದಂತೆ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಈದ್ ದಿನದಂದು ನಾವು ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನೆರೆಯ ಮುಸ್ಲಿಂ ಕುಟುಂಬಗಳ ಮನೆಯಿಂದ ನಮ್ಮ ಮನೆಗೆ ಆಙಾರ ತಂದು ಕೊಡುತ್ತಿದ್ದರು. ಅಂತಹ ಪರಿಸರದಲ್ಲಿ ಬೆಳೆದವನು ನಾನು. ಇಂದಿಗೂ ನನ್ನ ಗೆಳೆಯರಲ್ಲಿ ಅನೇಕ ಮುಸ್ಲಿಮರಿದ್ದಾರೆ. ಆದರೆ, ಗೋಧ್ರಾ ಘಟನೆಯ ಬಳಿಕ ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ ಈ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಮೋದಿಗೆ ಮತ ಹಾಕುತ್ತಾರಾ ಎಂಬ ಪ್ರಶ್ನೆಗೆ ಈ ದೇಶದ ನಾಗರಿಕರು ನನಗೆ ಮತ ಹಾಕುತ್ತಾರೆ ಎಂದು ಉತ್ತರಿಸಿದರು.

ಯಾವ ದಿನ ನಾನು ಹಿಂದೂ-ಮುಸ್ಲಿಂ ಬೇಧಭಾವ ಪ್ರಾರಂಭಿಸುತ್ತೇನೋ ಅಂದು ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ ಎಂದು ಖಡಕ್ ಆಗಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com