Jammu and Kashmir: ಮತ ಎಣಿಕೆಗೂ ಮೊದಲೇ 5 ಶಾಸಕರ ನಾಮನಿರ್ದೇಶನ; ಕಾಂಗ್ರೆಸ್ ಆಕ್ರೋಶ

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಅಡಿಯಲ್ಲಿ, ಕಾಶ್ಮೀರಿ ಪಂಡಿತರು (ಕೆಪಿ) ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ (ಪಿಒಜೆಕೆ) ನಿರಾಶ್ರಿತರಿಗೆ ಪ್ರಾತಿನಿಧ್ಯ ಸೇರಿದಂತೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಹೊಂದಿದ್ದಾರೆ.
Jammu and Kashmir Election
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ (ಸಂಗ್ರಹ ಚಿತ್ರ)
Updated on

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಜಮ್ಮು ಮತ್ತು ಕಾಶ್ಮೀರ ಚುನಾವಣಾ ಫಲಿತಾಂಶ ಇದೇ ಅಕ್ಟೋಬರ್ 8ರಂದು ಪ್ರಕಟವಾಗಲಿದ್ದು, ಇದಕ್ಕೂ ಮೊದಲೇ ಅಂದರೆ ಹೊಸ ಸರ್ಕಾರ ರಚನೆಗೂ ಮುನ್ನ ಕಣಿವೆ ರಾಜ್ಯದ ವಿಧಾನಸಭೆಗೆ ಐವರು ಸದಸ್ಯರ ನಾಮನಿರ್ದೇಶನ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಅಡಿಯಲ್ಲಿ, ಕಾಶ್ಮೀರಿ ಪಂಡಿತರು (ಕೆಪಿ) ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ (ಪಿಒಜೆಕೆ) ನಿರಾಶ್ರಿತರಿಗೆ ಪ್ರಾತಿನಿಧ್ಯ ಸೇರಿದಂತೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಹೊಂದಿದ್ದಾರೆ.

ಇದೇ ಅಧಿಕಾರದ ಮೇಲೆ ಲೆಫ್ಟಿನೆಂಟ್ ಗವರ್ನರ್ ಐವರು ಶಾಸಕರ ನಾಮನಿರ್ದೇಶನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಗೃಹ ಸಚಿವಾಲಯದಿಂದ ಸಲಹೆ ಮತ್ತು ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ ನಾಮನಿರ್ದೇಶನಗಳು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019ಕ್ಕೆ ಮಾಡಿದ ತಿದ್ದುಪಡಿಗಳ ಭಾಗವಾಗಿದೆ ಎನ್ನಲಾಗಿದೆ.

Jammu and Kashmir Election
Exit polls: ಹರಿಯಾಣದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ; ಜಮ್ಮು ಕಾಶ್ಮೀರದಲ್ಲೂ ಕಾಂಗ್ರೆಸ್-ಎನ್‌ಸಿಗೆ ಅಧಿಕಾರ

ಕಾಂಗ್ರೆಸ್ ಆಕ್ರೋಶ

ಹೊಸ ಸರ್ಕಾರ ರಚನೆಗೂ ಮುನ್ನ ವಿಧಾನಸಭೆಗೆ ಐವರು ಸದಸ್ಯರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶುಕ್ರವಾರ ಕಾಂಗ್ರೆಸ್ ನಾಯಕರು ಈ ಕ್ರಮವನ್ನು ಪ್ರಜಾಪ್ರಭುತ್ವದ ತತ್ವಗಳು ಮತ್ತು ಸಂವಿಧಾನದ ಮೇಲಿನ ದಾಳಿ ಎಂದು ಕರೆದಿದ್ದಾರೆ ಮತ್ತು 5 ಪ್ರತಿನಿಧಿಗಳ ನಾಮನಿರ್ದೇಶನ ಅನುಮೋದಿಸದಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಕರೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಹಿರಿಯ ಉಪಾಧ್ಯಕ್ಷ ರವೀಂದರ್ ಶರ್ಮಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೂ ಮುನ್ನ ಲೆಫ್ಟಿನೆಂಟ್ ಗವರ್ನರ್ ಐವರು ಶಾಸಕರ ನಾಮನಿರ್ದೇಶನವನ್ನು ನಾವು ವಿರೋಧಿಸುತ್ತೇವೆ.

ಅಂತಹ ಯಾವುದೇ ಕ್ರಮವು ಪ್ರಜಾಪ್ರಭುತ್ವ, ಜನರ ಆದೇಶ ಮತ್ತು ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಆಕ್ರಮಣವಾಗಿದೆ. ಲೆಫ್ಟಿನೆಂಟ್ ಗವರ್ನರ್ ಅವರು ಚುನಾವಣೆಯ ನಂತರ ರಚನೆಯಾಗುವ ಮಂತ್ರಿ ಮಂಡಳಿಯ ಸಲಹೆಯನ್ನು ಆಧರಿಸಿ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

“ಚುನಾವಣೆಯ ನಂತರದ ಬಹುಮತ ಅಥವಾ ಅಲ್ಪಸಂಖ್ಯಾತ ಸ್ಥಿತಿಯನ್ನು ಬದಲಾಯಿಸಲು ನಾಮನಿರ್ದೇಶನದ ನಿಬಂಧನೆಯನ್ನು ದುರುಪಯೋಗಪಡಿಸಿಕೊಳ್ಳುವುದು ಒಳ್ಳೆಯದಲ್ಲ. ಸರ್ಕಾರ ರಚನೆಯ ಮೊದಲು ಅಂತಹ ನಾಮನಿರ್ದೇಶನ “ಅಸಂವಿಧಾನಿಕ” ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿ ಬಹುಮತವನ್ನು ಈ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಆದರೆ ಅಕಾಲಿಕ ನಾಮನಿರ್ದೇಶನಗಳು ಚುನಾವಣೆಯ ಫಲಿತಾಂಶವನ್ನು ದುರ್ಬಲಗೊಳಿಸುತ್ತವೆ ಎಂದು ಕಾಂಗ್ರೆಸ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com