
ಮುಂಬೈ: ಭಾರತ ಕಂಡ ಅತ್ಯಂತ ಶ್ರೇಷ್ಠ ಉದ್ಯಮಿ ರತನ್ ಟಾಟಾ (Ratan Tata) ಅವರ ಮಾನವೀಯ ಗುಣಗಳಿಗೆ ಮತ್ತೊಂದು ಸಾಕ್ಷಿ ಅವರು ಬ್ರಿಟನ್ ರಾಜ King Charles ಆಯೋಜಿಸಿದ್ದ ಸನ್ಮಾನ ಸಮಾರಂಭಕ್ಕೆ ಗೈರಾಗಿದ್ದು....
ಹೌದು.. ಭಾರತದ ಅತಿ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ (Ratan Tata) ಅವರ ಮಾನವೀಯ ಗುಣಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ಜನಸಾಮಾನ್ಯರಿಂದ 'ದಾನ ವೀರ ಶೂರ ಕರ್ಣ' ಎಂದೇ ಕರೆಸಿಕೊಳ್ಳುತ್ತಿದ್ದ ರತನ್ ಟಾಟಾ, ತಮ್ಮ ಸಂಪತ್ತಿನ ಅರ್ಧ ಭಾಗಕ್ಕೂ ಹೆಚ್ಚಿನದನ್ನು ದಾನ ಮಾಡಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂ. ದಾನ ಮಾಡಿದ್ದ ಟಾಟಾ ಈ ಹಿಂದೆ ಬ್ರಿಟನ್ ರಾಜ King Charles ಆಯೋಜಿಸಿದ್ದ ಸನ್ಮಾನ ಸಮಾರಂಭಕ್ಕೆ ಗೈರಾಗಿದ್ದು ಮಾತ್ರವಲ್ಲದೇ ಗೈರಾದರೂ ರಾಜರ ಪ್ರೀತಿಗೆ ಪಾತ್ರರಾಗಿದ್ದರು.
ರತನ್ ಟಾಟಾಗೆ ಜೀವಮಾನ ಸಾಧನೆ ಸನ್ಮಾನ ಆಯೋಜಿಸಿದ್ದ ರಾಜ Charles
ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರು ಇಂಗ್ಲೆಂಡಿಗೆ ಆಮಂತ್ರಿಸಿದ್ದರು. ಅದು ರಾಯಲ್ ಮನೆತನದ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ರಾಜಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಅತಿ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣವನ್ನು ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಆ ಸನ್ಮಾನ ಕಾರ್ಯಕ್ರಮಕ್ಕೆ ರತನ್ ಟಾಟಾ ಗೈರಾಗಿದ್ದರು.
ಈ ಕುತೂಹಲಕಾರಿ ಕ್ಷಣವನ್ನು ಖ್ಯಾತ ಉದ್ಯಮಿ ಹಾಗೂ ಅಂಕಣಕಾರರಾದ ಸುಹೇಲ್ ಸೇಥ್ ನೆನಪಿಸಿಕೊಂಡಿದ್ದಾರೆ. ಅಂದು ರತನ್ ಟಾಟಾ ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ಇದೇ ಸುಹೇಲ್ ಸೇಥ್ ನಿಯುಕ್ತರಾಗಿದ್ದರು. ಅದರಂತೆ ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆಯನ್ನೂ ಮಾಡಿದ್ದರು.
ಒಂದೇ ಸಮನೆ ಕಾಲ್ ಮಾಡುತ್ತಿದ್ದ ರತನ್ ಟಾಟಾ
ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭ ಆಯಿತು. ಸುಹೇಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು! ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಈ ವೇಳೆ ನಡುಗುತ್ತಿರುವ ಧನಿಯಲ್ಲೇ ಸುಹೇಲ್ ಅವರಿಗೆ ಉತ್ತರಿಸಿದ್ದ ರತನ್ ಟಾಟಾ, “ಸುಹೇಲ್ ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ.
ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂಥಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್ಗೆ ಬರಲು ಸಾಧ್ಯ ಇಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು” ಎಂದರು.
ಈ ವೇಳೆ ರತನ್ ಟಾಟಾ ಅವರ ಉತ್ತರ ಕೇಳಿದ ಸುಹೇಲ್, “ರತನ್ ಜಿ. ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ. ಇಂಗ್ಲಿಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.
ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ನಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಅಂದು ಫೋನ್ ಇಟ್ಟಿದ್ದರು.
King Charlesಗೆ ಮಾಹಿತಿ ನೀಡಿದ್ದ ಸುಹೇಲ್
ಇನ್ನು ರತನ್ ಟಾಟಾ ಶತಾಯಗತಾಯ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿದ ಸುಹೇಲ್ ಅವರು, ಮರುದಿನವೇ ಮುಂಜಾನೆ ಬಕಿಂಗ್ ಹ್ಯಾಮ್ ಅರಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಅಷ್ಟು ಹೊತ್ತಿಗಾಗಲೇ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು. ಈ ವೇಳೆ ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಅವರ ನಾಯಿಗಳಿಗೆ ಅನಾರೋಗ್ಯವಾದ ಕಾರಣ ಅವರು ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ. ನಾನು ಎಷ್ಟೇ ಪ್ರಯತ್ನಿಸಿದರೂ ಅವರು ನಾಯಿಗಳನ್ನು ಬಿಟ್ಟು ಬರಲು ಒಪ್ಪುತ್ತಿಲ್ಲ ಎಂದು ಹೇಳಿದರು.
That’s the man ಎಂದ ರಾಜ Charles
ಸುಹೇಲ್ ಅವರ ಮಾತುಗಳನ್ನು ಕೇಳಿದ ಕಿಂಗ್ ಚಾರ್ಲ್ಸ್ ಅವರಿಗೆ ಕೊಂಚ ಅಸಮಾಧಾನವಾಯಿತಾದರೂ, ತಕ್ಷಣ ಅವರು That’s the man ಎಂದು ರತನ್ ಟಾಟಾ ಅವರನ್ನು ಹೊಗಳಿದರು. “ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ” ಎಂದು ಚಾರ್ಲ್ಸ್ ಹೇಳಿದರು ಎಂದು ಸುಹೇಲ್ ಹೇಳಿದ್ದಾರೆ.
ಅಲ್ಲದೆ ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮವು ಮುಂದೆ ನಡೆಯಲೇ ಇಲ್ಲ! ಅಚ್ಚರಿ ಎಂದರೆ ರತನ್ ಟಾಟಾ ಯಾವ ನಾಯಿಗಳಿಗಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದರೋ ಅವು ಎರಡೂ ಬೀದಿನಾಯಿಗಳಾಗಿದ್ದವು. ನಾಯಿಗಳನ್ನು ಕಂಡರೆ ಅವರಿಗೆ ಅಷ್ಟು ಪ್ರೀತಿ. ಇದೇ ಕಾರಣಕ್ಕೆ ರತನ್ ಟಾಟಾ ಎಲ್ಲರಿಗಿಂತ ಭಿನ್ನರಾಗಿ ಕಾಣುತ್ತಾರೆ. ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಪ್ರತಿ ಉದ್ಯೋಗಿಯನ್ನೂ ಅವರು ಅದೇ ಮಾನವೀಯ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ಅನೇಕರು ಹೇಳಿದ್ದಾರೆ ಎಂದು ಸುಹೇಲ್ ರತನ್ ಟಾಟಾರನ್ನು ನೆನಪಿಸಿಕೊಂಡಿದ್ದಾರೆ.
Advertisement