
ಮುಂಬೈನ ಪಶ್ಚಿಮ ಉಪನಗರ ಮಲಾಡ್ ಪೂರ್ವದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಾರ್ಯಕರ್ತನ ಮಗನನ್ನು ಹತ್ಯೆ ಮಾಡಲಾಗಿದ್ದು, ಇದು ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣದ ಪೊಲೀಸ್ ತನಿಖೆಯ ಬಗ್ಗೆ ಎಂಎನ್ಎಸ್ ಪ್ರಶ್ನೆಗಳನ್ನು ಎತ್ತಿದೆ. ಮಲಾಡ್ ಪೂರ್ವದ ದಿಂಡೋಶಿ ಪ್ರದೇಶದ ಎಂಎನ್ಎಸ್ ಕಾರ್ಯಕರ್ತನ ಮಗ ಆಕಾಶ್ ಮೈನ್ (27) ನನ್ನು ರಿಕ್ಷಾ ಚಾಲಕರು ಮತ್ತು ಸ್ಥಳೀಯ ಮಾರಾಟಗಾರರು ಹೊಡೆದು ಕೊಂದಿದ್ದಾರೆ.
ಶನಿವಾರದಂದು ದಸರಾ ಆಚರಣೆಗಾಗಿ ಹೊಸ ಕಾರು ಖರೀದಿಸಲು ಮೈನ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಲಾಡ್ ರೈಲು ನಿಲ್ದಾಣದ ಬಳಿ ಆಟೋವೊಂದು ಅವರ ಕಾರನ್ನು ಹಿಂದಿಕ್ಕಿತು. ನಂತರ ಆಕಾಶ್ ಮತ್ತು ರಿಕ್ಷಾ ಚಾಲಕನ ನಡುವೆ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ಕೈ ಮೀರಿದ್ದು ರಿಕ್ಷಾ ಚಾಲಕನು ತನ್ನ ಸ್ನೇಹಿತರು ಮತ್ತು ಸ್ಥಳೀಯ ಮಾರಾಟಗಾರರೊಂದಿಗೆ ಸೇರಿಕೊಂಡು MNS ಕಾರ್ಯಕರ್ತನ ಮಗನ ಮೇಲೆ ಹಲ್ಲೆ ಮಾಡಿದ್ದರು.
ಗುಂಪು ಆಕಾಶ್ ಮೈನ್ ನನ್ನು ಮಾರಣಾಂತಿಕವಾಗಿ ಥಳಿಸಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮನಕಲಕುವ ದೃಶ್ಯವೊಂದು ಗೋಚರಿಸುತ್ತಿದೆ. ವೀಡಿಯೋದಲ್ಲಿ ಜನಸಮೂಹವು ಆಕಾಶ್ ನನ್ನು ಮನಬಂದಂತೆ ನಿರಂತರವಾಗಿ ಥಳಿಸುತ್ತಿದೆ.
ವಿಡಿಯೋದಲ್ಲಿ ಮಗನನ್ನು ರಕ್ಷಿಸಿಕೊಳ್ಳಲು ಆತನ ತಾಯಿ ಅವನ ಮೇಲೆ ಮಲಗಿರುವುದನ್ನು ಕಾಣಬಹುದು,. ಇದೇ ವೇಳೆ ಇಬ್ಬರು ಮೂವರು ಅಪರಿಚಿತರು ಆತನ ತಂದೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ತಂದೆ ಕೈಮುಗಿದು ಕ್ಷಮೆ ಕೇಳುತ್ತಾನೆ ಮತ್ತು ಅವನನ್ನು ಹೋಗಲು ಬಿಡುವಂತೆ ವಿನಂತಿಸುತ್ತಾನೆ.
ಜನರು ಆಕಾಶ್ನನ್ನು ಥಳಿಸುತ್ತಿದ್ದಾಗ, ಅವನ ಪೋಷಕರು ಅವನನ್ನು ಉಳಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದರೂ ಆರೋಪಿಗಳು ಅವರ ಮಾತನ್ನು ಕೇಳಲಿಲ್ಲ. ಆರೋಪಿ ಆಟೋ ರಿಕ್ಷಾ ಚಾಲಕ ಕದಮ್ ಮತ್ತು ಇತರ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ಟೋಬರ್ 12ರಂದು ಈ ಘಟನೆ ನಡೆದಿದ್ದು, ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
Advertisement