
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಯಾಣಿಸುತ್ತಿದ್ದ ವಾಹನ ಸೇರಿದಂತೆ ಅವರ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾದ ಘಟನೆ ನಡೆದಿದೆ.
ಸೋಮವಾರ(ಅ.28) ಸಂಜೆ 6.30ರ ಸುಮಾರಿಗೆ ಸಂಭವಿಸಿದ್ದು, ಘಟನೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅವರ ಎಲ್ಲ ಭದ್ರತಾ ಸಿಬ್ಬಂದಿಗಳೂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಬೆಂಗಾವಲು ಕಾರುಗಳು ಮಾತ್ರ ಅಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ.
ಸ್ಕೂಟಿ ಚಾಲಕಿ ಎಡವಟ್ಟು
ಮೂಲಗಳ ಪ್ರಕಾರ ಸಿಎಂ ಪಿಣರಾಯಿ ವಿಜಯನ್ ಕೊಟ್ಟಾಯಂಗೆ ಭೇಟಿ ನೀಡಿ ವಾಪಸ್ಸಾಗುವ ವೇಳೆ ತಿರುವನಂತಪುರಂ ಬಳಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಏಕಾಏಕಿ ಬಲಕ್ಕೆ ತಿರುವು ತೆಗೆದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಪಿಣರಾಯಿ ವಿಜಯನ್ ಬೆಂಗಾವಲು ವಾಹನಗಳು ಪೈಕಿ ಮುಂಭಾಗದಲ್ಲಿದ್ದ ವಾಹನ ಆಕೆಗೆ ಢಿಕ್ಕಿ ತಪ್ಪಿಸಿಲು ಬ್ರೇಕ್ ಹಾಕಿದೆ. ಈ ವೇಳೆ ಹಿಂದಿನಿಂದ ಬಂದ ವಾಹನಗಳು ಒಂದರ ಹಿಂದೆ ಒಂದರಂತೆ ಪರಸ್ಪರ ಢಿಕ್ಕಿಯಾಗಿವೆ. ಎಲ್ಲ ವಾಹನಗಳೂ ಬ್ರೇಕ್ ಹಾಕಿದ್ದರಿಂದ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.
ಈ ಘಟನೆ ಬಳಿಕ ಮುಖ್ಯಮಂತ್ರಿಗಳನ್ನು ಬೇರೆ ವಾಹನದ ಮೂಲಕ ಕಳುಹಿಸಿಕೊಡಲಾಯಿತು, ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement