ಒಡಿಶಾ: ಸುಂದರ್ಗಢದಲ್ಲಿ ಎದುರಾಳಿ ಗುಂಪಿನಿಂದ ಅಲೆಮಾರಿ ಕುಟುಂಬದ ಐವರ ಹತ್ಯೆ, ಐದು ಮಂದಿ ಅಪಹರಣ
ರೂರ್ಕೆಲಾ: ಒಡಿಶಾ ರಾಜ್ಯದ ಸುಂದರ್ಗಢ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಕರಮ್ಡಿಹಿ ಗ್ರಾಮದ ಬಳಿ ನಿನ್ನೆ ಮಂಗಳವಾರ ರಾತ್ರಿ ಅಲೆಮಾರಿ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿ, ಇತರ ಐವರನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ಕೊಲೆಯಾದವರಲ್ಲಿ ಮೂವರು ಮಹಿಳೆಯರಾಗಿದ್ದಾರೆ.
ನಿನ್ನೆ ತಡರಾತ್ರಿ ನಡೆದ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆಯನ್ನು ಅಪಹರಿಸಲಾಗಿದ್ದು, ಇತರ ನಾಲ್ಕು ಮಂದಿ ಮಕ್ಕಳು ಮತ್ತು ಸಮುದಾಯದ ವಯಸ್ಕ ಪುರುಷ ಸದಸ್ಯರು ನಂತರ ತಡರಾತ್ರಿ ನಡೆದ ಕಲಹದಲ್ಲಿ ಗಾಯಗೊಂಡಿದ್ದಾರೆ.
ಘಟನೆ ವೇಳೆ ಅಲೆಮಾರಿ ಗುಂಪುಗಳು ತಂಗಿದ್ದ ಟೆಂಟ್ನಲ್ಲಿ ಸುಮಾರು 20 ಕುಟುಂಬ ಸದಸ್ಯರು ಇದ್ದರು. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಸುಂದರ್ಗಢ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಲು ಮತ್ತು ಅಪಹರಣಕ್ಕೊಳಗಾದವರನ್ನು ರಕ್ಷಿಸಲು ಭಾರಿ ಶೋಧ ನಡೆಸಿದ್ದಾರೆ. ಪೊಲೀಸ್ ಡಿಐಜಿ (ಪಶ್ಚಿಮ ಶ್ರೇಣಿ) ಬಿರ್ಜೇಶ್ ಕುಮಾರ್ ರೈ ಮತ್ತು ಸುಂದರ್ಗಢ ಎಸ್ಪಿ ಪ್ರತ್ಯೂಷ್ ದಿವಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸದರ್ ಪೊಲೀಸರು ವೈಜ್ಞಾನಿಕ ತಂಡ ಮತ್ತು ಶ್ವಾನದಳದೊಂದಿಗೆ ಆಗಮಿಸಿ ಇಂದು ಬೆಳಗ್ಗೆ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಪಡಿಸಿಕೊಂಡರು.
ಘಟನೆ ನಡೆದ ಕರಮಡಿಹಿಯ ಏಕಾಂತ ಸ್ಥಳದಲ್ಲಿ ಟೆಂಟ್ ಹಾಕಿಕೊಂಡು ಸಂತ್ರಸ್ತ ಅಲೆಮಾರಿ ಕುಟುಂಬ ವಾಸವಿತ್ತು ಎಂದು ಎಸ್ಪಿ ದಿವಾಕರ್ ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಒಬ್ಬರಾದ ಅವಿನಾಶ್ ಪವಾರ್ ಅವರು ನೀಡಿದ ದೂರಿನ ಪ್ರಕಾರ, ಸಂತ್ರಸ್ತರು ಮತ್ತು ಗಾಯಾಳುಗಳು ನಿದ್ರೆಯಲ್ಲಿದ್ದಾಗ ಸುಮಾರು ನಾಲ್ವರು ಏಕಾಏಕಿ ದಾಳಿ ನಡೆಸಲು ಪ್ರಾರಂಭಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ