ಪಾಟ್ನಾ: ರಾಜಕೀಯದಲ್ಲಿ ಯಾರಿಗೂ ಶಾಶ್ವತವಾಗಿ ಬಾಗಿಲು ಮುಚ್ಚುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಶುಕ್ರವಾರ ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಬಿಹಾರ ಮುಖ್ಯಮಂತ್ರಿ ಹಾಗೂ ಮಾಜಿ ಮಿತ್ರ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಬಾಗಿಲು ತೆರೆದಿದೆ ಎಂಬ ಸೂಚನೆ ನೀಡಿದ್ದಾರೆ.
ಬಿಜೆಪಿ ಮತ್ತು ಜೆಡಿಯು ಎರಡೂ ಪಕ್ಷಗಳು ಮೂಲಗಳು ನಿತೀಶ್ ಕುಮಾರ್ ಅವರು ಮತ್ತೆ ಎನ್ ಡಿಎ ಜೊತೆ ಕೈಜೋಡಿಸುತ್ತಾರೆ ಎಂದು ಹೇಳುತ್ತಿವೆ. ಆದರೆ ಜೆಡಿಯು ಪ್ರಶ್ನಾತೀತ ನಾಯಕ ನಿತೀಶ್ ಕುಮಾರ್ ಅವರು ಮಾತ್ರ ಇನ್ನೂ ಮರುಮೈತ್ರಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, "ನಿತೀಶ್ ಕುಮಾರ್ ಅಥವಾ ಜೆಡಿಯುಗೆ ಸಂಬಂಧಿಸಿದಂತೆ, ಬಾಗಿಲು ಎಂದಿಗೂ ಶಾಶ್ವತವಾಗಿ ಮುಚ್ಚುವುದಿಲ್ಲ. ರಾಜಕೀಯದಲ್ಲಿ ಸಮಯ ಬಂದಾಗ ಮುಚ್ಚಿದ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆದರೆ ಬಾಗಿಲು ತೆರೆಯಬೇಕೇ ಅಥವಾ ಬೇಡವೇ ಎಂಬುದನ್ನು ನಮ್ಮ ಕೇಂದ್ರ ನಾಯಕತ್ವ ನಿರ್ಧರಿಸುತ್ತದೆ" ಎಂದಿದ್ದಾರೆ.
2022 ರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಂತರ, ಬಿಹಾರ ಮುಖ್ಯಮಂತ್ರಿಗೆ ತನ್ನ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಕೇಸರಿ ಪಕ್ಷ ಹೇಳಿತ್ತು. ಆದರೆ ಇಂಡಿಯಾ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡ ನಂತರ ಮತ್ತೆ ನಿತೀಶ್ ಕುಮಾರ್ ಜೊತೆ ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ.
Advertisement