'ಹಣ ವ್ಯರ್ಥ ಮಾಡಲು ಇಷ್ಟವಿಲ್ಲ...': ಪತ್ನಿ ಕೊಂದು, ತಾನು ಗುಂಡು ಹಾರಿಸಿಕೊಂಡ ಕ್ಯಾನ್ಸರ್ ಪೀಡಿತ ರಿಯಲ್ ಎಸ್ಟೇಟ್ ಡೀಲರ್!

ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ರಿಯಲ್ ಎಸ್ಟೇಟ್ ಡೀಲರ್ ಮತ್ತು ಆತನ ಪತ್ನಿ
ರಿಯಲ್ ಎಸ್ಟೇಟ್ ಡೀಲರ್ ಮತ್ತು ಆತನ ಪತ್ನಿ
Updated on

ಗಾಜಿಯಾಬಾದ್: ರಿಯಲ್ ಎಸ್ಟೇಟ್ ಡೀಲರ್ ಒಬ್ಬರು ನಿನ್ನೆ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಕುಲದೀಪ್ ತ್ಯಾಗಿ (46) ಎಂಬಾತ ಡೆತ್ ನೋಟ್ ಬರೆದಿದ್ದು, ತನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಚೇತರಿಕೆ ಕಾಣುವ ಬಗ್ಗೆ ಯಾವುದೇ ಭರವಸೆ ಇಲ್ಲದಿರುವುದರಿಂದ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು. ನಾನು ಮತ್ತು ನನ್ನ ಪತ್ನಿ ಒಟ್ಟಿಗೆ ಇರಲು ಪ್ರತಿಜ್ಞೆ ಮಾಡಿದ್ದು, ತನ್ನ ಪತ್ನಿ ಅಂಶು ತ್ಯಾಗಿಯನ್ನು ಕೂಡ ಕೊಂದು ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ.

ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಇದ್ದಾರೆ.

ಪೊಲೀಸರ ಪ್ರಕಾರ, ರಾಜ್ ನಗರ ಎಕ್ಸ್‌ಟೆನ್ಶನ್‌ನ ರಾಧಾ ಕುಂಜ್ ಸೊಸೈಟಿಯಲ್ಲಿರುವ ತನ್ನ ಮನೆಯಲ್ಲಿ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕುಲದೀಪ್ ಮೊದಲಿಗೆ ತನ್ನ ಪತ್ನಿಯನ್ನು ಕೊಂದಿದ್ದಾರೆ. ನಂತರ ತಾನು ಗುಂಡು ಹಾರಿಸಿಕೊಂಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅವರ ಮಕ್ಕಳು ಮನೆಯಲ್ಲೇ ಇದ್ದರು. ಗುಂಡೇಟಿನ ಶಬ್ದ ಕೇಳಿ ತಮ್ಮ ಹೆತ್ತವರ ರೂಂ ಬಳಿ ಬಂದು ನೋಡಿದಾಗ, ಕುಲದೀಪ್ ಅವರ ಮೃತದೇಹ ನೆಲದ ಮೇಲೆ ಮತ್ತು ಅಂಶು ಅವರ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿತ್ತು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಡೀಲರ್ ಮತ್ತು ಆತನ ಪತ್ನಿ
'ಮಗಳೇ ಹರ್ಷಿತಾ, ನೀನು ಮಾಡಿದ್ದು ಸರಿಯಲ್ಲ...': ಅನ್ಯ ಸಮುದಾಯದ ಯುವಕನೊಂದಿಗೆ ಯುವತಿ ಮದುವೆ; ತಂದೆ ಆತ್ಮಹತ್ಯೆ!

ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. 'ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಮತ್ತು ನನ್ನ ಕುಟುಂಬಕ್ಕೆ ಅದರ ಬಗ್ಗೆ ತಿಳಿದಿಲ್ಲ. ನಾನು ಬದುಕುವುದು ಅನಿಶ್ಚಿತವಾಗಿರುವುದರಿಂದ ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ನಾವು ಶಾಶ್ವತವಾಗಿ ಒಟ್ಟಿಗೆ ಇರಲು ಪ್ರತಿಜ್ಞೆ ಮಾಡಿದ್ದರಿಂದ ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಇದು ನನ್ನ ನಿರ್ಧಾರ. ಯಾರೊಬ್ಬರೂ, ವಿಶೇಷವಾಗಿ ನನ್ನ ಮಕ್ಕಳು ತಪ್ಪಿತಸ್ಥರಲ್ಲ' ಎಂದು ಬರೆಯಲಾಗಿದೆ.

ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ ಮಾತನಾಡಿ, ಕುಲದೀಪ್ ತ್ಯಾಗಿ ತನ್ನ ಪತ್ನಿಗೆ ಗುಂಡು ಹಾರಿಸಿದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com