
ಪಾಟ್ನಾ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಗುರುವಾರ ಹೇಳಿದ್ದಾರೆ.
ಚುನಾವಣೆ ನಂತರ ನಿತೀಶ್ ಕುಮಾರ್ ಎನ್ಡಿಎ ಸಿಎಂ ಆಗ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತರಾಗಿರುವ ಬಿಜೆಪಿಯ ಹಿರಿಯ ನಾಯಕ ರೈ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಎನ್ಡಿಎ ಸಿಎಂ ಅಭ್ಯರ್ಥಿ ಕುರಿತು ನಡೆಯುತ್ತಿರುವ ಊಹಾಪೋಹಗಳ ಮಧ್ಯೆ ರೈ ಅವರ ಹೇಳಿಕೆಯು ರಾಜಕೀಯ ಮಹತ್ವವನ್ನು ಪಡೆದಿದೆ.
ಬಿಜೆಪಿಯ ವರಿಷ್ಠರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತಿತ್ತು. ಈ ಊಹಾಪೋಹಗಳಿಗೆ ನಿತ್ಯಾನಂದ ರೈ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಮಾನಸಿಕ ಆರೋಗ್ಯ ಮತ್ತು ಜನಪ್ರಿಯತೆ ಕುಸಿತದ ವರದಿ ನಡುವೆಯೂ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿಯೇ ಎನ್ ಡಿಎ ಚುನಾವಣೆ ಎದುರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪದೇ ಪದೇ ಹೇಳುತ್ತಿದ್ದಾರೆ.
Advertisement