
ಮೀರತ್: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಅಪರಾಧವನ್ನು ಮುಚ್ಚಿಹಾಕಲು ವಿಷಪೂರಿತ ಹಾವನ್ನು ಆತನ ದೇಹದ ಬಳಿ ಇಟ್ಟು ನಾಟಕವಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದ್ದು, ಹಾವು ಕಡಿದಿರುವುದು ಸುಳ್ಳು ಎಂದು ತಿಳಿದುಬಂದಿದೆ.
ರವಿತಾ (30) ಎಂಬ ಮಹಿಳೆ ಮತ್ತು ಆಕೆಯ ಪ್ರಿಯಕರ ಅಮರ್ದೀಪ್ (20) ಎಂಬುವವರನ್ನು ಬಂಧಿಸಲಾಗಿದೆ. ಅಮರ್ದೀಪ್ ಪತಿಯ ಸ್ನೇಹಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಹ್ಸುಮಾ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಬರ್ಪುರ್ ಸಾದತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸರ್ಕಲ್ ಅಧಿಕಾರಿ (ಸಿಒ) ಅಭಿಷೇಕ್ ಕುಮಾರ್ ಪಟೇಲ್ ತಿಳಿಸಿದ್ದಾರೆ.
'ಅಮಿತ್ ಕಶ್ಯಪ್ (30) ಅಲಿಯಾಸ್ ಮಿಕ್ಕಿ ಭಾನುವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ವೇಳೆ ಅವರ ಹಾಸಿಗೆಯ ಬಳಿ ವಿಷಪೂರಿತ ಹಾವು ಕಂಡುಬಂದಿದ್ದು, ಅವರು ಹಾವು ಕಡಿತದಿಂದ ಸಾವಿಗೀಡಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ' ಎಂದು ಪಟೇಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
'ವರದಿ ಬಂದ ನಂತರ, ನಾವು ಪ್ರಕರಣದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ರವಿತಾ (30) ಎಂಬುವರು ತಾನು ಮತ್ತು ಅಮರದೀಪ್ (20) ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ' ಎಂದು ಸಿಒ ಹೇಳಿದರು.
'ಇಬ್ಬರು ಆರೋಪಿಗಳು ಅಮಿತ್ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಅಪಘಾತದಂತೆ ಬಿಂಬಿಸಲು ಹಾವನ್ನು ಅವರ ದೇಹದ ಬಳಿ ಇಟ್ಟಿದ್ದಾರೆ. ಹಾವು ಕೂಡ ದೇಹದ ಕೆಳಗೆ ಸಿಲುಕಿಕೊಂಡು ಹಲವಾರು ಬಾರಿ ಕಚ್ಚಿತ್ತು. ಇದು ಪ್ರಾಥಮಿಕ ತನಿಖೆಯಲ್ಲಿ ಗೊಂದಲಕ್ಕೆ ಕಾರಣವಾಯಿತು' ಎಂದು ಅವರು ಹೇಳಿದರು.
ಅದೇ ಗ್ರಾಮದವರೇ ಆದ ಅಮರದೀಪ್, ರವಿತಾ ಜೊತೆ ಸಂಬಂಧ ಹೊಂದಿದ್ದರು.
ಪತ್ನಿ ಮತ್ತು ಸ್ನೇಹಿತನ ನಡುವಿನ ಸಂಬಂಧದ ಕುರಿತು ಅಮಿತ್ ಅವರಿಗೆ ತಿಳಿದಿತ್ತು. ಈ ಬಗ್ಗೆ ಅವರು ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ರವಿತಾ ಮತ್ತು ಅಮರದೀಪ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement