ಚಿಕ್ಕಮಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ
ಚಿಕ್ಕಮಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾಗಿರುವ ಘಟನೆ ಕಡೂರು ತಾಲೂಕಿನ ಸಕರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೀರನಹಳ್ಳಿಯಲ್ಲಿ ವರದಿಯಾಗಿದೆ.
ಜಯಣ್ಣ (42) ಮೃತ ದುರ್ದೈವಿ. ಜಯಣ್ಣ ಕೆಲ ವರ್ಷಗಳ ಹಿಂದೆ ಶೃತಿ ಎಂಬಾಕೆಯನ್ನು ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ಬಳಿಕ ಶೃತಿ ತನ್ನ ಸಂಬಂಧಿಯೊಂದಿಗೆ ಸಲುಗೆಯಿಂದಿದ್ದು, ಈ ಸಲುಗೆ ಅನೈತಿಕ ಸಂಬಂಧಕ್ಕೆ ತಿರುಗಿತ್ತು.
ಪತ್ನಿ ಹಾಗೂ ಆಕೆಯ ಸಂಬಂಧಿ ನಡುವಿನ ಅನೈತಿಕ ಸಂಬಂಧ ಪತಿ ಜಯಣ್ಣನ ಗಮನಕ್ಕೆ ಬಂದಿದ್ದು, ಇದರಿಂದ ಕುಪಿತನಾದ ಆತ ಇಬ್ಬರೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ.
ಈ ವಿಚಾರ ಸಂಬಂಧ ಪತಿಯೊಂದಿಗೆ ಆಗಾಗ್ಗೆ ಜಗಳ ನಡೆಯುತ್ತಿದ್ದರೂ ಶೃತಿ ತನ್ನ ಸಂಬಂಧಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು ಎಂದು ತಿಳಿದು ಬಂದಿದೆ.
ತಮ್ಮ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಶೃತಿ ಹಾಗೂ ಆಕೆಯ ಪ್ರಿಯಕರ ಜಯಣ್ಣನನ್ನು ಹತ್ಯೆ ಮಾಡಲು ಸಂಚು ಮಾಡಿದ್ದರು. ಅದರಂತೆ ಕಳೆದ ಜೂ.16ರಂದು ಪ್ರೇಮಿಗಳಿಬ್ಬರು ಸೇರಿ ಮದ್ಯದಲ್ಲಿ ವಿಷ ಮಿಶ್ರಣ ಮಾಡಿ ಜಯಣ್ಣನಿಗೆ ಕುಡಿಸಿದ್ದರು.
ಪತ್ನಿ ಹಾಗೂ ಆಕೆಯ ಪ್ರಿಯಕರ ಸಂಚು ಅರಿಯದ ಪತಿ ಜಯಣ್ಣ ಇದರಿಂದ ಅಸ್ವಸ್ಥನಾಗಿ ಹೊಟ್ಟೆ ನೋವಿನಿಂದ ನರಳಾಟ ಆರಂಭಿಸುತ್ತಿದ್ದಂತೆ ಪತ್ನಿ ಶೃತಿ ತನ್ನ ಪ್ರಿಯಕರ ಕಿರಣ್ ಕುಮಾರ್ ನ ಕಾರಿನಲ್ಲಿ ಜಯಣ್ಣನನ್ನು ಕೂರಿಸಿಕೊಂಡು ಅರಸೀಕೆರೆಯ ಆಸ್ಪತ್ರೆಗೆ ದಾಖಲಿಸುವುದಾಗಿ ಕರೆದೊಯ್ತುತ್ತಿರುವಂತೆ ಬಿಂಬಿಸಿದ್ದು, ಕಾರಿನಲ್ಲಿ ಸುತ್ತಾಡಿ, ಜಯಣ್ಣನ ಬಾಯಿ, ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಇದು ಸಹಜ ಸಾವು ಎಂದು ಬಿಂಬಿಸಿದ್ದಾರೆ.
ಈ ಬಗ್ಗೆ ಅನುಮಾನಗೊಂಡ ಕೆಲ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದಾಗ, ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಸಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ