
ಛತ್ತಾರ್ಪುರ: ಪತ್ನಿ ಚಿಕಿತ್ಸೆಗೆಂದು ಬಂದಿದ್ದ ಹಿರಿಯ ವ್ಯಕ್ತಿಯನ್ನು ವೈದ್ಯರೇ ಆಸ್ಪತ್ರೆ ತುಂಬಾ ಎಳೆದಾಡಿ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಛತ್ತಾರ್ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಏಪ್ರಿಲ್ 17ರಂದು ಈ ಘಟನೆ ನಡೆದಿದ್ದು, ತನ್ನ ವೃದ್ದ ಪತ್ನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ ಸುಮಾರು 77 ವರ್ಷ ವಯಸ್ಸಿನ ವೃದ್ದನನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಮನಸೋ ಇಚ್ಛೆ ಥಳಿಸಿದ್ದಾರೆ.
ವಯಸ್ಸಾದ ವ್ಯಕ್ತಿ ಎಂದೂ ಕೂಡ ನೋಡದೇ ದುರ್ಬಲ ವೃದ್ಧನನ್ನು ಆಸ್ಪತ್ರೆಯ ಆವರಣದಾದ್ಯಂತ ಎಳೆದೊಯ್ದು ಥಳಿಸಿದ್ದಾರೆ. ಅಲ್ಲದೆ ವೃದ್ದನನ್ನು ಪೊಲೀಸರಿಗೆ ಹಿಡಿದುಕೊಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಏನಿದು ಘಟನೆ?
77 ವರ್ಷದ ಉಧವ್ಲಾಲ್ ಜೋಷಿ ಎಂಬುವವರು ತಮ್ಮ ಪತ್ನಿಯ ಹೊಟ್ಟೆಯ ರಕ್ತನಾಳ ಕಾಯಿಲೆಗಾಗಿ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಅದಾಗಲೇ ರೋಗಿಗಳು ತುಂಬಿ ತುಳುಕುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೂರಾರು ಮಂದಿ ಇದ್ದರು. ಆಸ್ಪತ್ರೆಯಲ್ಲಿ ಜನಸಂದಣಿ ನೋಡಿದ ವೈದ್ಯರು ಸಿಟ್ಟಿಗೆದ್ದು ಯಾಕೆ ಇಷ್ಟು ಮಂದಿ ತುಂಬಿದ್ದೀರಿ ಎಂದು ಕೂಗಾಡಿದ್ದಾರೆ.
ಈ ವೇಳೆ ಅದೇ ಸರತಿಸಾಲಲ್ಲಿ ನಿಂತಿದ್ದ ವೃದ್ಧ ಉಧವ್ಲಾಲ್ ಜೋಷಿ ಅವರನ್ನು ಓರ್ವ ವೈದ್ಯ ನೀವೇಕೆ ಸರತಿ ಸಾಲಲ್ಲಿ ನಿಂತಿದ್ದೀರಿ..? ಇಲ್ಲಿಂದ ಹೊರಡಿ ಎಂದು ಹೊರಕ್ಕೆ ತಳ್ಳಿದ್ದಾರೆ. ಈ ವೇಳೆ ಜೋಷಿ ತಮ್ಮ ಪತ್ನಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದೇನೆ. ಸ್ಲಿಪ್ ಕೂಡ ಪಡೆದಿದ್ದೇನೆ ಎಂದರೂ ಕೇಳದ ವೈದ್ಯ ನೋಡ ನೋಡುತ್ತಲೇ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ.
ಬಳಿಕ ವೈದ್ಯರು ವೃದ್ಧ ಜೋಶಿ ಅವರನ್ನು ಆಸ್ಪತ್ಪೆ ತುಂಬಾ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ವೈದ್ಯರ ದೌರ್ಜನ್ಯವನ್ನು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುತ್ತಲೇ ವೈದ್ಯರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಮಾತನಾಡಿದ ಉಧವ್ಲಾಲ್ ಜೋಷಿ, 'ಆಸ್ಪತ್ರೆಯಲ್ಲಿನ ಜನಸಂದಣಿಯಿಂದ ಸಿಟ್ಟಿಗೆದ್ದ ವೈದ್ಯರು, ನೀವು ಸರದಿಯಲ್ಲಿ ಏಕೆ ಇದ್ದೀರಿ ಎಂದು ಕೇಳಿದರು. ನಾನು ವಿವರಿಸಲು ಪ್ರಯತ್ನಿಸಿದಾಗ, ವೈದ್ಯರು ಕಪಾಳಮೋಕ್ಷ ಮಾಡಿದರು. ನಂತರ, ವೈದ್ಯರು ಅವರನ್ನು ಆಸ್ಪತ್ರೆ ಆವರಣದೊಳಗಿನ ಪೊಲೀಸ್ ಠಾಣೆಯ ಕಡೆಗೆ ಎಳೆದೊಯ್ದರು. ವೈದ್ಯರು ನನ್ನನ್ನು ಒದ್ದು ಚೌಕಿಗೆ ಎಳೆದೊಯ್ದರು. ಅವರು ನನಗೆ ಹೊಡೆದು ಕನ್ನಡಕವನ್ನು ಒಡೆದರು. ಅವರು ನನ್ನ ಸ್ಲಿಪ್ ಅನ್ನು ಹರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನನ್ನ ಪತ್ನಿಯ ಮೇಲೂ ಹಲ್ಲೆ ನಡೆಸಲಾಯಿತು" ಎಂದು ಜೋಶಿ ವರದಿಗಾರರಿಗೆ ತಿಳಿಸಿದರು.
2 ದಿನಗಳ ಹಿಂದಿನ ಘಟನೆ
ಇನ್ನು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. GL ಅಹಿರ್ವಾರ್, 'ಇದು ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಒಪ್ಪಿಕೊಂಡರು. ಆರಂಭದಲ್ಲಿ, ರೋಗಿಯ ಕಡೆಯವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವೈದ್ಯರು ಹೇಳಿಕೊಂಡರು. ಆದಾಗ್ಯೂ, ವೀಡಿಯೊವು ವೈದ್ಯರ ಸ್ವೀಕಾರಾರ್ಹವಲ್ಲದ ಮತ್ತು ನಾಚಿಕೆಗೇಡಿನ ನಡವಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಾವು ತಕ್ಷಣ ಇಲಾಖಾ ತನಿಖೆಗೆ ಆದೇಶಿಸಿದ್ದೇವೆ. ವೈದ್ಯರಿಗೆ ನೋಟಿಸ್ ನೀಡಲಾಗಿದೆ ಮತ್ತು ವಿಚಾರಣಾ ಸಮಿತಿ ಸದಸ್ಯರು ಅವರ ಬಳಿ ಹೋಗಿ ತನಿಖೆ ನಡೆಸುತ್ತಾರೆ ಎಂದು ಹೇಳಿದರು.
Advertisement