
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತ್ನಿ ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಉಗ್ರರ ದಾಳಿಯನ್ನು ಬಿಜೆಪಿಯ ಹಿಂದೂತ್ವದ ಜೊತೆಗೆ ಲಿಂಕ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತರು ಅನಾನುಕೂಲ ಹಾಗೂ ತೊಂದರೆ ಅನುಭವಿಸುತ್ತಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಹಿಂದೂತ್ವವನ್ನು ಬೆಳೆಸುವಲ್ಲಿ ತೊಡಗಿದೆ ಎಂದು ದೂಷಿಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ವಾದ್ರಾ, ನಮ್ಮ ದೇಶದಲ್ಲಿ ಈ ಸರ್ಕಾರ ಹಿಂದೂತ್ವದ ಬಗ್ಗೆ ಮಾತನಾಡುವುದನ್ನು ನಾವು ನೋಡುತ್ತೇವೆ. ಅಲ್ಪಸಂಖ್ಯಾತರು ಅನಾನುಕೂಲ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವೇಳೆ ಉಗ್ರರು ಜನರನ್ನು ಗುರುತಿಸಿದರೆ, ಈ ರೀತಿ ಯಾಕೆ ಮಾಡ್ತಾರೆ? ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಡಕು ಉಂಟಾಗಿದೆ. ಹಾಗಾಗಿ ಈ ರೀತಿಯ ಕೃತ್ಯ ಮಾಡುತ್ತಾರೆ ಎಂದು ಹೇಳಿದರು.
ಉಗ್ರರು ಜನರ ಗುರುತನ್ನು ಪರಿಶೀಲಿಸುವ ಮತ್ತು ಹಿಂದೂಗಳನ್ನು ಕೊಲ್ಲುವ ಕೃತ್ಯವು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿರುವ ಸಂದೇಶವಾಗಿದೆ. ಹಿಂದೂಗಳು ಎಲ್ಲಾ ಮುಸ್ಲಿಮರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬುದು ಈ ರೀತಿಯ ಸಂಘಟನೆಗಳಿಗೆ ಅನಿಸಿದೆ. ಗುರುತನ್ನು ಪತ್ತೆ ಹಚ್ಚಿ ನಂತರ ಯಾರನ್ನೊ ಕೊಲ್ಲುವುದು ಪ್ರಧಾನಿಗೆ ನೀಡಿದ ಸಂದೇಶವಾಗಿದೆ. ಕಾರಣ, ಮುಸ್ಲಿಂರು ದುರ್ಬಲರಾಗಿದ್ದಾರೆ ಎನ್ನುವ ಭಾವನೆ ಉಗ್ರ ಸಂಘಟನೆಗಳಲ್ಲಿ ಇದೆ. ಅಲ್ಪಸಂಖ್ಯಾತರಲ್ಲಿ ದುರ್ಬಲರೆಂಬ ಭಾವನೆಯಿದೆ. ನಮ್ಮ ದೇಶದಲ್ಲಿ ನಾವು ಸುರಕ್ಷಿತರು ಮತ್ತು ಜಾತ್ಯತೀತರು ಎಂಬ ಭಾವನೆ ಸರ್ಕಾರದ ಮಟ್ಟದಿಂದ ಬರಬೇಕು. ಆಗ ಈ ರೀತಿಯ ಕೃತ್ಯಗಳು ನಡೆಯುವುದನ್ನು ನಾವು ನೋಡುವುದಕ್ಕೆ ಆಗಲ್ಲ ಎಂದಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ, ಆಘಾತ ವ್ಯಕ್ತಪಡಿಸಿದ್ದಾರೆ. ಉಗ್ರರ ಕೃತ್ಯ ಕುರಿತು ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಸಮರ್ಥನೆ ನಾಚಿಕೆಗೇಡಿನತನದು. ಖಂಡಿಸುವ ಬದಲು ಉಗ್ರರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪಾಕ್ ಉಗ್ರರು ಮಾಡಿರುವ ದೌರ್ಜನ್ಯಗಳಿಗೆ ಭಾರತವನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement