
ನವದೆಹಲಿ: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ 28 ಮಂದಿ ಹಿಂದೂಗಳನ್ನು ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಭಾರತ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಮೊದಲ ಹಂತವಾಗಿ ಭಾರತ ಸರ್ಕಾರ ಪಾಕಿಸ್ತಾನಿಯರ ವೀಸಾ ಸ್ಥಗಿತ ಸ್ಥಗಿತಗೊಳಿಸಿದ್ದು, ತತ್ ಕ್ಷಣದಿಂದಲೇ ಈ ಕ್ರಮ ಜಾರಿಗೆ ಬಂದಿದೆ.
ಈಗಾಗಲೇ ಭಾರತ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಹಲವು ಕ್ರಮಗಳನ್ನು ಘೋಷಿಸಿದ್ದು, ಎರಡು ದೇಶಗಳನ್ನು ಸಂಪರ್ಕಿಸುವ ಮುಖ್ಯ ಗಡಿ ಪ್ರದೇಶ ಅಠಾರಿಯನ್ನು ಬಂದ್ ಮಾಡಿದೆ.
ಆ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಫ್ತು ಮತ್ತು ಆಮದು ಬಂದ್ ಆಗಿದ್ದು, ಪಾಕ್ ಪ್ರಜೆಗಳಿಗೂ ಭಾರತ ಪ್ರವೇಶ ತಾತ್ಕಾಲಿಕ ನಿಷೇಧಿಸಲಾಗಿದೆ. ಸಿಂಧೂ ನದಿ ನೀರಿನ ಒಪ್ಪಂದದಂತೆ (Indus River Water Treaty) ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ನೀರನ್ನು ಈ ಕ್ಷಣದಿಂದಲೇ ಭಾರತ ತಡೆ ಹಿಡಿದಿದೆ.
ಇದಲ್ಲದೇ ಭಾರತದಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವುದು ಮತ್ತು ಕೆಲವು ಪಾಕಿಸ್ತಾನಿ ವೀಸಾ ಹೊಂದಿರುವವರು 48 ಗಂಟೆಗಳ ಒಳಗೆ ದೇಶ ಬಿಡುವಂತೆ ಆದೇಶ ನೀಡಿದೆ.
ವೀಸಾ ಸ್ಥಗಿತ, ತಕ್ಷಣದಿಂದಲೇ ಜಾರಿ!
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತೆಗಾಗಿನ ಸಂಪುಟ ಸಮಿತಿಯು ತೆಗೆದುಕೊಂಡ ನಿರ್ಧಾರಗಳ ಮುಂದುವರಿಕೆಯಾಗಿ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು, "ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ ಎಲ್ಲಾ ಅಸ್ತಿತ್ವದಲ್ಲಿರುವ ಮಾನ್ಯ ವೀಸಾಗಳನ್ನು ಏಪ್ರಿಲ್ 27, 2025 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ವೈದ್ಯಕೀಯ ವೀಸಾಗಳು ಏಪ್ರಿಲ್ 29, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಹೇಳಿದೆ.
ಅಲ್ಲದೆ "ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾಗಳ ಅವಧಿ ಮುಗಿಯುವ ಮೊದಲು ಭಾರತವನ್ನು ತೊರೆಯಬೇಕು, ಭಾರತೀಯ ಪ್ರಜೆಗಳು ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ತಪ್ಪಿಸಲು ಬಲವಾಗಿ ಸೂಚಿಸಲಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು ಸಹ ಆದಷ್ಟು ಬೇಗ ಭಾರತಕ್ಕೆ ಮರಳಲು ಸೂಚಿಸಲಾಗಿದೆ ಎಂದು ಹೇಳಿದೆ.
ಭಾರತದ ರಾಜತಾಂತ್ರಿಕ ಕ್ರಮಗಳು
ಇದಲ್ಲದೆ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಉದ್ವಿಗ್ನತೆಗೆ ಪ್ರತಿಕ್ರಿಯೆಯಾಗಿ, ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ:
ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ X ಖಾತೆಯನ್ನು ತಡೆಹಿಡಿಯಲಾಗಿದೆ. ಅದರಂತೆ ಭಾರತದಲ್ಲಿ X ನಲ್ಲಿ @GovtofPakistan ಅನ್ನು ಪ್ರವೇಶಿಸಲು ಪ್ರಯತ್ನಿಸುವ ಬಳಕೆದಾರರು ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳುವ ಸಂದೇಶ ಕಾಣುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಭದ್ರತೆ ಕುರಿತ ಸಂಪುಟ ಸಮಿತಿಯ (CCS) ಸಭೆಯಲ್ಲಿ, ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ವಿಶ್ವಾಸಾರ್ಹವಾಗಿ ಮತ್ತು ಬದಲಾಯಿಸಲಾಗದಂತೆ ತ್ಯಜಿಸುವವರೆಗೆ ಈ ನಿರ್ಧಾರ ಜಾರಿಯಲ್ಲಿರುತ್ತದೆ.
ಭಾರತವು ಸಮಗ್ರ ಅಟ್ಟಾರಿ ಚೆಕ್ ಪೋಸ್ಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲು ನಿರ್ಧರಿಸಿದೆ. SAARC ವೀಸಾ ವಿನಾಯಿತಿ ಯೋಜನೆ (SVES) ಅಡಿಯಲ್ಲಿ ನೀಡಲಾದ ಯಾವುದೇ ವೀಸಾಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಪಾಕಿಸ್ತಾನವು 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಆದೇಶಿಸಲಾಗಿದೆ.
ಪಾಕಿಸ್ತಾನ ಹೈಕಮಿಷನ್ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ ಮತ್ತು ಒಂದು ವಾರದೊಳಗೆ ಭಾರತವನ್ನು ತೊರೆಯುವಂತೆ ಆದೇಶಿಸಲಾಗಿದೆ.
ಭದ್ರತಾ ಕ್ರಮವಾಗಿ, ಭಾರತವು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನಿಂದ ತನ್ನದೇ ಆದ ರಕ್ಷಣಾ, ನೌಕಾಪಡೆ ಮತ್ತು ವಾಯು ಸಲಹೆಗಾರರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಅಲ್ಲಗೆ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗಿದೆ.
ಸೇವಾ ಸಲಹೆಗಾರರ ಐದು ಸಹಾಯಕ ಸಿಬ್ಬಂದಿಯನ್ನು ಎರಡೂ ಹೈಕಮಿಷನ್ಗಳಿಂದ ಹಿಂತೆಗೆದುಕೊಳ್ಳಲಾಗುತ್ತದೆ.
ಹೈಕಮಿಷನ್ಗಳ ಒಟ್ಟಾರೆ ಬಲವನ್ನು ಪ್ರಸ್ತುತ 55 ರಿಂದ 30 ಕ್ಕೆ ಇಳಿಸಲಾಗುವುದು. ಈ ಕಡಿತಗಳು ಮೇ 1, 2025 ರಿಂದ ಜಾರಿಗೆ ಬರುತ್ತವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
Advertisement