
ಶ್ರೀನಗರ: ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಚರ್ಚಿಸಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಏಪ್ರಿಲ್ 28 ರಂದು ಬೆಳಿಗ್ಗೆ 10:30 ಕ್ಕೆ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆದಿದ್ದಾರೆ.
ವಿಶೇಷ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಮಂತ್ರಿ ಮಂಡಳಿಯು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಏಪ್ರಿಲ್ 23 ರಂದು ಸಲಹೆ ನೀಡಿತ್ತು. ವಿಶೇಷ ಅಧಿವೇಶನದಲ್ಲಿ ಪಹಲ್ಗಾಮ್ನ ಬೈಸರನ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಯೊಬ್ಬರ ಹತ್ಯೆಯನ್ನು ಆಡಳಿತಾರೂಢ ಹಾಗೂ ಪ್ರತಿಪಕ್ಷದ ಸದಸ್ಯರು ಖಂಡಿಸಲಿದ್ದಾರೆ.
ಸ್ಥಳೀಯ ಕುದುರೆ ಸವಾರ ಆದಿಲ್ ಪ್ರವಾಸಿಗರ ಪ್ರಾಣ ಉಳಿಸಲು ಉಗ್ರರಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿ ಅವರನ್ನು ಕೊಂದು ಹಾಕಿದ್ದಾರೆ. ಅಧಿವೇಶನದಲ್ಲಿ ಉಗ್ರರನ್ನು ಹೇಗೆ ಎದುರಿಸಬೇಕು ಮತ್ತು ಮುಂದೆ ಅಂತಹ ದಾಳಿ ನಡೆಯದಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ
'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲ್ಪಡುವ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರನ್ನು ಕೊಂದು ಹಾಕಿರುವ ಘಟನೆ ಕಾಶ್ಮೀರದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರಗಾಮಿಗಳು ನಡೆಸಿದ ನಾಗರಿಕ ಹತ್ಯೆ ವಿರುದ್ಧ ಕಾಶ್ಮೀರದಲ್ಲಿ ಬಂದ್ ಮಾಡಲಾಗಿದೆ. ಭೀಕರ ದಾಳಿ ನಂತರ ಭಾರತವು ಪಾಕಿಸ್ತಾನದೊಂದಿಗಿನ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದು, ನೆರೆಯ ರಾಷ್ಟ್ರದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ.
Advertisement