
ಚಂಡೀಗಢ: ನಿನ್ನೆ ಗುರುವಾರ ಬೆಳಗ್ಗೆಯಿಂದ ಭಾರತಕ್ಕೆ ಭೇಟಿ ನೀಡಿದ ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ಮರಳಲು ಅಟ್ಟಾರಿ-ವಾಘಾ ಗಡಿಯತ್ತ ಮುಖ ಮಾಡುತ್ತಿದ್ದಾರೆ. ಈ ಗಡಿಯ ಮೂಲಕ ನಡೆಯುವ ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರ-ವಹಿವಾಟು ಕೂಡ ಅನಿಶ್ಚಿತತೆಯಿಂದ ಕೂಡಿದೆ.
ಮಂಗಳವಾರದ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತವು ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು (SVES) ಸ್ಥಗಿತಗೊಳಿಸುವ ನಿರ್ಧಾರವನ್ನು ಅನುಸರಿಸಿ ಪಾಕಿಸ್ತಾನ ಪ್ರಜೆಗಳು ದೇಶವನ್ನು ತೊರೆಯಲು 48 ಗಂಟೆಗಳ ಗಡುವನ್ನು ಹೊಂದಿದ್ದಾರೆ.
ನಿನ್ನೆ ಬೆಳಗ್ಗೆ ಹೊತ್ತಿಗೆ, ಹಲವಾರು ಪಾಕಿಸ್ತಾನಿ ಕುಟುಂಬಗಳು ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ತವರಿಗೆ ಹಿಂತಿರುಗಲು ಅಮೃತಸರ ಬಳಿಯ ಅಟ್ಟಾರಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ನ್ನು ತಲುಪಿದ್ದವು.
ಕರಾಚಿಯ ಕುಟುಂಬವೊಂದು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾಗಿ ಹೇಳಿದರು. ನಾವು ಒಂದು ಕಾರ್ಯಕ್ರಮಕ್ಕೆ ಹಾಜರಾಗಲು ಇಲ್ಲಿಗೆ ಬಂದಿದ್ದೇವೆ. ನಮಗೆ 45 ದಿನಗಳ ವೀಸಾ ಇತ್ತು ಆದರೆ ಈ ಸ್ಥಿತಿಯಲ್ಲಿ ಕೂಡಲೇ ನಾವು ಭಾರತವನ್ನು ತೊರೆಯಬೇಕು. ನಾವು ಏಪ್ರಿಲ್ 15 ರಂದು ಇಲ್ಲಿಗೆ ಬಂದಿದ್ದೇವೆ. ಗಡಿಯನ್ನು ಮುಚ್ಚುವುದು ತಪ್ಪು ಕ್ರಮ. ಎರಡು ರಾಷ್ಟ್ರಗಳ ನಡುವೆ ಸಹೋದರತ್ವ ಇರಬೇಕು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳು ತಪ್ಪು ಎಂದು ಹೆಸರು ಹೇಳದ ಪಾಕಿಸ್ತಾನ ಕುಟುಂಬ ಸದಸ್ಯರು ಹೇಳುತ್ತಾರೆ.
ಪಹಲ್ಗಾಮ್ ದಾಳಿಯನ್ನು ಖಂಡಿಸುತ್ತಾ, ಏಪ್ರಿಲ್ 15 ರಂದು ತನ್ನ ಕುಟುಂಬದೊಂದಿಗೆ 90 ದಿನಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಪ್ರಜೆ ಮನ್ಸೂರ್, ಈ ಘಟನೆ ಸಂಭವಿಸಬಾರದಿತ್ತು. ಯಾರೇ ಮಾಡಿದ್ದರೂ ಅದು ತಪ್ಪು. ನಾವು ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಸಹೋದರತ್ವ ಮತ್ತು ಸ್ನೇಹವನ್ನು ಬಯಸುತ್ತೇವೆ. ಇಂದು ನಾವು ಬಹಳ ದುಃಖದಿಂದ ಭಾರತ ತೊರೆಯಬೇಕಾಗಿದೆ ಎಂದರು.
ಪಾಕಿಸ್ತಾನಕ್ಕೆ ಪ್ರಯಾಣಿಸಲು ವೀಸಾ ಹೊಂದಿರುವ ಕೆಲವು ಭಾರತೀಯ ಪ್ರಜೆಗಳು ನಿನ್ನೆ ಪಾಕಿಸ್ತಾನಕ್ಕೆ ಹೋಗುವ ಆಶಯದೊಂದಿಗೆ ಐಸಿಪಿಯನ್ನು ತಲುಪಿದರು, ಅದರಲ್ಲಿ ಕರಾಚಿಯಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಉದ್ದೇಶಿಸಿದ್ದ ಗುಜರಾತ್ ಕುಟುಂಬವೂ ಸೇರಿದೆ. ನಮಗೆ ಎರಡು ತಿಂಗಳ ಹಿಂದೆ ವೀಸಾ ಸಿಕ್ಕಿತು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು. ಆದಾಗ್ಯೂ, ಅಟ್ಟಾರಿ ಭೂ-ಸಾರಿಗೆ ಪೋಸ್ಟ್ ಮುಚ್ಚಲಾಗಿದೆ ಎಂದು ಹೇಳಿದಾಗ, ಮನೆಗೆ ಮರಳಲು ಸಿದ್ಧರಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಹೋಗಲು ನಿನ್ನೆ ಸಂಜೆ ಅಮೃತಸರ ತಲುಪಿದ ರಾಜಸ್ಥಾನದ ಇಬ್ಬರು ವ್ಯಕ್ತಿಗಳು, ಅಟ್ಟಾರಿ ಭೂ-ಸಾರಿಗೆ ಪೋಸ್ಟ್ ಮುಚ್ಚಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು. ಮದುವೆ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ಹೋಗಬೇಕಿದ್ದ ಶೈತಾನ್ ಸಿಂಗ್, ಭಯೋತ್ಪಾದಕರು ಮಾಡಿದ್ದು ತಪ್ಪು. ಗಡಿ ಮುಚ್ಚಿರುವುದರಿಂದ ನಮಗೆ ಪಾಕಿಸ್ತಾನಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ; ಇನ್ನು ಏನಾಗುತ್ತದೆ ಎಂದು ನೋಡೋಣ ಎಂದರು.
ತನ್ನ ಸಹೋದರನ ಮದುವೆಗೆ ನೆರೆಯ ದೇಶಕ್ಕೆ ಹೋಗುತ್ತಿದ್ದ ಸುರಿಂದರ್ ಸಿಂಗ್, ಮದುವೆಯನ್ನು ಮುಂದೂಡಬೇಕಾಗುತ್ತದೆ ಎಂದು ಹೇಳಿದರು. ನನ್ನ ಅಜ್ಜಿ ಮತ್ತು ಅವರ ನಾಲ್ವರು ಪುತ್ರರು ಪಾಕಿಸ್ತಾನದಲ್ಲಿದ್ದಾರೆ, ಅವರ ಒಬ್ಬ ಮಗ ಭಾರತದಲ್ಲಿಯೇ ಇದ್ದಾರೆ. ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ತುಂಬಾ ತಪ್ಪು ಎನ್ನುತ್ತಾರೆ.
ಪಾಕಿಸ್ತಾನದಲ್ಲಿರುವ ನೂರಾರು ಭಾರತೀಯರು ಮೇ 1 ರ ಮೊದಲು ಹಿಂತಿರುಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Advertisement