
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಹೋರಾಡುವಂತೆ ಕರೆ ನೀಡಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ. ಮುಗ್ಧ ಜನರನ್ನು ಕೊಂದಿರುವ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಭಯೋತ್ಪಾದನೆ, ಉಗ್ರರ ಕೃತ್ಯಗಳಿಗೆ ಯಾರೂ ಬೆಂಬಲ ನೀಡಬಾರದು. ಭಯೋತ್ಪಾದನೆ ಇಂದು ಜಾಗತಿಕ ಶಾಂತಿ ವ್ಯವಸ್ಥೆಗೆ ಅಡ್ಡಿಯಾಗಿದೆ. ಹೀಗಾಗಿ ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ದೇಶಗಳು ಒಂದಾಗಬೇಕು ಎಂದು ಕರೆ ನೀಡಿದೆ.
ಈ ಖಂಡನೀಯ ಭಯೋತ್ಪಾದನಾ ಕೃತ್ಯದ ಅಪರಾಧಿಗಳು, ಸಂಘಟಕರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಅವರನ್ನು ನ್ಯಾಯದ ಕಟಕಟೆಗೆ ತರುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ.
ಎಲ್ಲಾ 15 ಸದಸ್ಯ ರಾಷ್ಟ್ರಗಳ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರು ಪತ್ರಿಕಾ ಹೇಳಿಕೆ ಮೂಲಕ ಘೋಷಿಸಿದ್ದಾರೆ.
ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳು, ಭಾರತ ಹಾಗೂ ನೇಪಾಳ ಸರ್ಕಾರಗಳಿಗೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಗಾಯಗೊಂಡವರು ತ್ವರಿತವಾಗಿ, ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ.
ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಭಾರತ ಸರಕಾರ ಇಂಡಸ್ ಜಲ ಒಪ್ಪಂದವನ್ನು ಅಮಾನತುಪಡಿಸಿದೆ. ಅಟಾರಿ ಗಡಿಯಲ್ಲಿರುವ ಚೆಕ್ ಪೋಸ್ಟ್ ಮುಚ್ಚಲು ಮತ್ತು ಹೈಕಮಿಷನ್ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಅಧಿಕೃತ ದಾಖಲೆಗಳೊಂದಿಗೆ ಈ ಗಡಿಮಾರ್ಗವಾಗಿ ಭಾರತ ಪ್ರವೇಶಿಸಿದವರು 2025ರ ಮೇ 1ರೊಳಗೆ ವಾಪಸ್ ಹೋಗುವಂತೆ ಸೂಚಿಸಿದೆ. ಎಸ್ಪಿಇಎಸ್ ವೀಸಾದಡಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು 48 ತಾಸುಗಳೊಳಗೆ ಭಾರತ ತೊರೆಯಬೇಕು ಎಂದು ಸೂಚಿಸಿದೆ.
Advertisement