
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಲಾಭ ಪಡೆದು ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಒತ್ತಾಯಿಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಅಂಗೀಕರಿಸಲಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, "ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತೆಯು ಕೇಂದ್ರಾಡಳಿತ ಪ್ರದೇಶದ ಚುನಾಯಿತ ಸರ್ಕಾರದ ಜವಾಬ್ದಾರಿಯಲ್ಲ. ಆದರೆ ನಾನು ಈ ಸಂದರ್ಭವನ್ನು ರಾಜ್ಯದ ಸ್ಥಾನಮಾನ ಪಡೆಯಲು ಬಳಸುವುದಿಲ್ಲ. ನಾನು ಈಗ ರಾಜ್ಯದ ಸ್ಥಾನಮಾನಕ್ಕಾಗಿ ಹೇಗೆ ಒತ್ತಾಯಿಸಬಹುದು? ನನಗೆ ಕೀಳು ರಾಜಕೀಯದಲ್ಲಿ ನಂಬಿಕೆಯಿಲ್ಲ. ಕಳೆದುಹೋದ 26 ಜೀವಗಳಿಗೆ ನಾನು ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ರಾಜ್ಯದ ಸ್ಥಾನಮಾನಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೇ?" ಎಂದು ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸೋಲಿಸಲು ರಾಜ್ಯದ ಸ್ಥಾನಮಾನ ಮರುಸ್ಥಾಪನೆಗೆ ಒತ್ತಾಯಿಸಿದ ಸದನದ ಕೆಲವು ಸದಸ್ಯರನ್ನು ಉಲ್ಲೇಖಿಸಿ ಸಿಎಂ ಈ ಹೇಳಿಕೆ ನೀಡಿದರು.
"ನಾವು ಹಿಂದೆ(ಕೇಂದ್ರ ಸರ್ಕಾರದೊಂದಿಗೆ) ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡಿದ್ದೇವೆ ಮತ್ತು ಭವಿಷ್ಯದಲ್ಲಿ ನಾವು ಅದರ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇವೆ. ಆದರೆ ಈಗ ಅಲ್ಲ. ಈ ಬಾರಿ ಭಯೋತ್ಪಾದನಾ ಕೃತ್ಯವನ್ನು ಖಂಡಿಸುವುದು ಮತ್ತು ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಬಿಟ್ಟು ಬೇರೆ ಯಾವುದರಲ್ಲೂ ರಾಜಕೀಯ ಮಾಡುವುದಿಲ್ಲ" ಎಂದು ಮುಖ್ಯಮಂತ್ರಿ ಹೇಳಿದರು.
ಭಯೋತ್ಪಾದಕ ದಾಳಿಯ ನಂತರ ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಮಾಧ್ಯಮ ನಿರ್ವಾಹಕರ ಬಗ್ಗೆಯೂ ಅವರು ಎಚ್ಚರಿಕೆ ನೀಡಿದರು. "ಶೇಕಡಾ 90 ರಷ್ಟು ಜನರು ಸತ್ಯವನ್ನು ಎತ್ತಿಹಿಡಿಯುತ್ತಿದ್ದರೆ, ಶೇಕಡ 10 ರಷ್ಟು ಜನ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಹರಡುವಿಕೆಯನ್ನು ನಾವು ಸಹಿಸುವುದಿಲ್ಲ. ಇದರಿಂದ ತಕ್ಷಣವೇ ದೂರವಿರಲು ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ" ಎಂದು ಅಬ್ದುಲ್ಲಾ ಹೇಳಿದರು.
"ನಾನು ಇಂತಹ ಸಂದರ್ಭದಲ್ಲಿ ಕೇಂದ್ರಕ್ಕೆ ಹೋಗಿ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದರೆ ನನಗೆ ಶಾಪ ತಟ್ಟುತ್ತದೆ" ಎಂದು ಒಮರ್ ತಿಳಿಸಿದರು.
Advertisement