
ನವದೆಹಲಿ: ಅಮೆರಿಕದಿಂದ ಗಡಿಪಾರಾಗಿರುವ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಸೋಮವಾರ ದೆಹಲಿ ಕೋರ್ಟ್ ಹೆಚ್ಚಿನ ತನಿಖೆಗಾಗಿ ಮತ್ತೆ 12 ದಿನ ಎನ್ಐಎ ಕಸ್ಟಡಿಗೆ ನೀಡಿ ಆದೇಶಿಸಿದೆ.
ತಹವ್ವೂರ್ ರಾಣಾನ 18 ದಿನಗಳ NIA ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಆರೋಪಿಯನ್ನು ಬಿಗಿ ಭದ್ರತೆಯ ನಡುವೆ ಮತ್ತು ಮುಖಕ್ಕೆ ಮುಸುಕು ಹಾಕಿ NIA ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರ ಮುಂದೆ ಹಾಜರುಪಡಿಸಿದರು.
ಮುಂಬೈ ದಾಳಿಯ ಉಗ್ರನ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ತನಿಖೆಗಾಗಿ ರಾಣಾನನ್ನು ಮತ್ತೆ 12 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದೆ.
ANI ಜೊತೆ ಮಾತನಾಡಿದ ರಾಣಾ ಪರ ವಕೀಲ ಪಿಯೂಷ್ ಸಚ್ದೇವ್ ಅವರು, "ಆರೋಪಿಯನ್ನು ಇನ್ನೂ 12 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಕಳುಹಿಸಲಾಗಿದೆ. ಎನ್ಐಎ ಹೆಚ್ಚಿನ ದಾಖಲೆಗಳೊಂದಿಗೆ ಆರೋಪಿಯ ವಿಚಾರಣೆ ನಡೆಸಲು ಬಯಸಿದೆ ಎಂದರು.
ಎನ್ಐಎ ರಾಣಾ ವಿಚಾರಣೆಗೆ ಹೆಚ್ಚಿನ ಸಮಯ ಬೇಕು ಎಂದು ಹೇಳಿದೆ. ತಹವ್ವೂರ್ ರಾಣಾ ತನಿಖೆಯಲ್ಲಿದ್ದಾರೆ. ನಾನು ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದೇನೆ ಅವರು ತಿಳಿಸಿದ್ದಾರೆ.
64 ವರ್ಷದ ರಾಣಾ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ನಿಕಟವರ್ತಿಯಾಗಿದ್ದಾರೆ.
2008 ರ ಮುಂಬೈ ದಾಳಿಯ ಪ್ರಮುಖ ಆರೋಪಿ ರಾಣಾ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದರಿಂದ ಗಡಿಪಾರುನಿಂದ ತಪ್ಪಿಸಿಕೊಳ್ಳುವ ಕೊನೆಯ ಯತ್ನ ವಿಫಲವಾದ ನಂತರ ಗುರುವಾರ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ.
Advertisement