
ಕಾಶ್ಮೀರ: ಪಹಲ್ಗಾಮ್ ಉಗ್ರರ ದಾಳಿ ನಂತರ ಪಾಕ್ ಪ್ರಜೆಗಳು ದೇಶ ತೊರೆಯುವಂತೆ ಸರ್ಕಾರ ಆದೇಶ ಮಾಡಿದ್ದು, ದಶಕಗಳಿಂದಲೂ ಇಲ್ಲಿಯೇ ವಾಸಿಸುತ್ತಿರುವವರು ದೇಶ ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. 'ತಮ್ಮ ಮೂಲ ದೇಶಕ್ಕೆ ಮರಳುವುದಕ್ಕಿಂತ ಇಲ್ಲಿಯೇ ಸಾಯುತ್ತೇವೆ' ಎಂದು ಕಾಶ್ಮೀರದಲ್ಲಿ ಪುನರ್ವಸತಿ ಪಡೆದಿರುವ ಮಾಜಿ ಉಗ್ರರ ಪಾಕಿಸ್ತಾನಿ ಪತ್ನಿಯರು ಹೇಳಿದ್ದಾರೆ.
ಮಾಜಿ ಉಗ್ರರಿಗಾಗಿ 2010 ರ ಪುನರ್ವಸತಿ ನೀತಿಯಡಿಯಲ್ಲಿ ಕಾಶ್ಮೀರಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆಯರು, ತಮ್ಮನ್ನು ಇಲ್ಲಿಯೇ ಉಳಿಯಲು ಬಿಡಿ ಅಥವಾ ನಮ್ಮ ಶವವನ್ನು ಕಳುಹಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾಜಿ ಉಗ್ರರನ್ನು ವಿವಾಹವಾಗಿರುವ ಅಲಿಜಾ ರಫೀಕ್ ಅವರು 2013 ರಲ್ಲಿ ಆಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಬಂದಿದ್ದರು. ಈ ಯೋಜನೆಯಡಿ ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನ ಅಥವಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿದ್ದ ಉಗ್ರರ ಪುನರ್ವಸತಿಗೆ ಅನುವು ಮಾಡಿಕೊಡಲಾಗಿತ್ತು. ಆದರೆ ಹಿಂಸಾಚಾರವನ್ನು ತ್ಯಜಿಸಿ ಕಣಿವೆಗೆ ಮರಳಬೇಕಾಗಿತ್ತು. ಸದ್ಯ ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ವಾಸಿಸುತ್ತಿರುವ ರಫೀಕ್ ದೇಶ ತೊರೆಯುವಂತೆ ಪೊಲೀಸರು ಹೇಳಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಫೀಕ್, "ನಮ್ಮನ್ನು ದೇಶ ಬಿಟ್ಟು ಹೋಗುವಂತೆ ಹೇಳಲಾಗಿದೆ. ನನಗೆ ಮೂವರು ಮಕ್ಕಳಿದ್ದಾರೆ. ನನ್ನ ಕಿರಿಯ ಮಗಳನ್ನು ಇಲ್ಲೇ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಆಕೆ ಚಿಕ್ಕವಳು, ನಾನು ಹೇಗೆ ಆಕೆಯನ್ನು ಇಲ್ಲಿಯೇ ಬಿಟ್ಟು ಹೋಗಲಿ ಎಂದು ಕಣ್ಣೀರಿಟ್ಟರು.
ಗಂಡನನ್ನು ಇಲ್ಲೇ ಬಿಟ್ಟು ಹೋಗುವುದಾದರೂ ಹೇಗೆ, ಇಲ್ಲಿಯೇ ಮನೆ ಕಟ್ಟಿಕೊಂಡಿದ್ದೇನೆ, ಸರ್ಕಾರದ ನೀತಿಯಿಂದ ಇಲ್ಲಿಗೆ ಬಂದಿದ್ದೇವೆ, ನಾವೇನು ಮಾಡಿದ್ದೇವೆ? ಇದರಲ್ಲಿ ನಮ್ಮ ತಪ್ಪೇನು? ಚುನಾವಣಾ ಕಾರ್ಡ್, ಆಧಾರ್ ಕಾರ್ಡ್ ಇದೆ. ಚುನಾವಣೆಯಲ್ಲಿ ವೋಟ್ ಮಾಡಿದ್ದೇನೆ ಎಂದು ಗದ್ಗರಿತರಾದ ರಫೀಕ್, ಇಲ್ಲಿಯೇ ವಾಸಿಸಲು ಅವಕಾಶ ಮಾಡಿಕೊಡುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಮನವಿ ಮಾಡಿದರು.
'ದಯವಿಟ್ಟು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಬೇಡಿ. ನಾವು ಯಾವುದೇ ಪಾಪ ಮಾಡಿಲ್ಲ. ದಯವಿಟ್ಟು ನಮಗೆ ಇಲ್ಲಿ ವಾಸಿಸಲು ಬಿಡಿ, ಇಲ್ಲದಿದ್ದರೆ ನಮ್ಮನ್ನು ಕೊಂದು ನಮ್ಮ ದೇಹಗಳನ್ನು ಗಡಿಯಾಚೆ ಕಳುಹಿಸಿ ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಮಾಡುವುದಾಗಿ ಹೇಳಿದರು.
ಮತ್ತೋರ್ವ ಪಾಕಿಸ್ತಾನಿ ಮಹಿಳೆ ಜಾಹಿದಾ ಬೇಗಂ, ಕಾಶ್ಮೀರದಲ್ಲಿ ಶಾಂತಿಯಿಂದ ಬದುಕಲು ಬಯಸುವುದಾಗಿ ಹೇಳಿದರು. ದೇಶ ತೊರೆಯಲು ಪೊಲೀಸರು ನನಗೆ ಹೇಳಿದ್ದಾರೆ. ನಾನು ಹಿಂತಿರುಗಲು ಇಷ್ಟವಿಲ್ಲ. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ನನ್ನ ಮಗನಿಗೆ 10 ವರ್ಷ. ಆತನನ್ನು ಇಲ್ಲಿಯೇ ಇರಿಸಲು ನನಗೆ ಹೇಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಇಲ್ಲಿಯೇ ವಾಸಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.
ನಿವಾಸದ ಪ್ರಮಾಣಪತ್ರ, ಆಧಾರ್, ಚುನಾವಣಾ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತೋರಿಸಿದ ಬೇಗಾಂ, ಅವೆಲ್ಲವನ್ನೂ ಸರ್ಕಾರದಿಂದ ನೀಡಲಾಗಿದೆ. ಇದರಿಂದ ನನ್ನ ಮಕ್ಕಳ ಜೀವನ ಹಾಳಾಗುತ್ತದೆ, 15 ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದೇನೆ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ. ನನ್ನ ಮಕ್ಕಳೂ ಸಹ ಹಿಂತಿರುಗಿ ಹೋಗಲು ಬಯಸುವುದಿಲ್ಲ ಎಂದು ಅವರು ಹೇಳಿದರು.
Advertisement