
ಅಹ್ಮದಾಬಾದ್: ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿ ಬಳಿಕ ದೇಶಾದ್ಯಂತ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ವ್ಯಾಪಕವಾಗಿದ್ದು, ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ಬರೊಬ್ಬರಿ 6500ಕ್ಕೂ ಅಧಿಕ ಅಕ್ರಮ ಬಾಂಗ್ಲಾದೇಶಿಯರನ್ನು ವಶಕ್ಕೆ ಪಡೆಯಲಾಗಿದೆ.
ಹೌದು.. ಮಂಗಳವಾರ ಅಹಮದಾಬಾದ್ನಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಜಿಲ್ಲೆಯಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿ ಈವರೆಗೂ 6500 ಅಕ್ರಮ ಬಾಂಗ್ಲಾದೇಶಿಗರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅವರು ನಿವಾಸಿಸುತ್ತಿದ್ದ ಚಂದೋಲಾ ಕೆರೆಯ ಸಮೀಪದ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಬೃಹತ್ ನೆಲಸಮ ಮತ್ತು ಅಕ್ರಮ ಒತ್ತುವರಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ.
ಅಹ್ಮದಾಬಾದ್ ಮಹಾನಗರ ಪಾಲಿಕೆಯು ಅಕ್ರಮ ಒತ್ತುವರಿ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಂಟಿ ಪೊಲೀಸ್ ಆಯುಕ್ತ-ಅಪರಾಧ ಶರದ್ ಸಿಂಘಾಲ್ ನೇತೃತ್ವದಲ್ಲಿ ಸುಮಾರು 2,000 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಹೇಳಿದರು.
ಎಎಂಸಿ ಮಂಗಳವಾರ ಮುಂಜಾನೆಯೇ 50 ತಂಡಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರತೀ ತಂಡದಲ್ಲೂ ತಲಾ ಒಂದೊಂದು ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಚಂದೋಲಾ ಕೆರೆ ಆವರಣದಲ್ಲಿ ಕೊನೆಯದಾಗಿ ಅಕ್ರಮ ಒತ್ತವರಿ ತೆರವು ಕಾರ್ಯಾಚರಣೆಯನ್ನು 2009 ರಲ್ಲಿ ನಡೆಸಲಾಗಿತ್ತು.
ಇದೀಗ ಇಂದು AMC ನಡೆಸಿದ ಸಮೀಕ್ಷೆಯಲ್ಲಿ ಸರ್ಕಾರಿ ಭೂಮಿಯನ್ನು ಮತ್ತೆ ಅತಿಕ್ರಮಿಸಲಾಗಿದೆ ಮತ್ತು ಸರೋವರದ ಸುತ್ತಲೂ ಗುಡಿಸಲುಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸರೋವರದ ಸುತ್ತಲಿನ ಸಿಯಾಸತ್ನಗರ ಮತ್ತು ಬಂಗಾಳಿ ವಾಸ್ನಂತಹ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ವಾಸಿಸುತ್ತಿದ್ದಾರೆ" ಎಂದು ಸಿಂಘಾಲ್ ಹೇಳಿದರು.
ಮಲಿಕ್ ಪ್ರಕಾರ, ಚಂದೋಲಾ ಸರೋವರದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ ಹಿಂದಿನ ಮಾಸ್ಟರ್ಮೈಂಡ್ ಮೆಹಮೂದ್ ಪಠಾಣ್ ಅಲಿಯಾಸ್ ಲಲ್ಲು ಬಿಹಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ. ಅಧಿಕಾರಿಗಳ ಪ್ರಕಾರ ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ಬಾಡಿಗೆ ವಸತಿ ಮತ್ತು ಆಧಾರ್ ಕಾರ್ಡ್ಗಳನ್ನು ಪಡೆಯಲು ಅವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
"ಸಿಯಾಸತ್ನಗರ ಮತ್ತು ಬಂಗಾಳಿ ವಾಸ್ನಂತಹ ಪ್ರದೇಶಗಳನ್ನು ಒಳಗೊಂಡಿರುವ ಚಂದೋಲಾ ಸರೋವರದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಲ್ಲಿ AMC ಗೆ ಸಹಾಯ ಮಾಡಲು ನಾವು 2,000 ಪೊಲೀಸರನ್ನು ಮತ್ತು ರಾಜ್ಯ ಮೀಸಲು ಪೊಲೀಸರ (SRP) 20 ಕಂಪನಿಗಳನ್ನು ನಿಯೋಜಿಸಿದ್ದೇವೆ. ಇಡೀ ನಗರದಾದ್ಯಂತ ಪೊಲೀಸರನ್ನು ಸಹ ಜಾಗರೂಕರನ್ನಾಗಿ ಮಾಡಲಾಗಿದೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಮಲಿಕ್ ಹೇಳಿದರು.
ಉಪ ಮುನ್ಸಿಪಲ್ ಆಯುಕ್ತ ಡಿಸಿ ಪರ್ಮಾರ್ ಅವರು ಸುಮಾರು 2,000 ಅಕ್ರಮವಾಗಿ ನಿರ್ಮಿಸಲಾದ ಮನೆಗಳು ಮತ್ತು ಇತರ ಆಸ್ತಿಗಳನ್ನು ಕೆಡವಲು ಗುರುತಿಸಲಾಗಿದೆ ಮತ್ತು ಮಧ್ಯಾಹ್ನದ ವೇಳೆಗೆ 50 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಎಲ್ಲ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆ. ಚಂದೋಲಾ ಕೆರೆಯ ಜಿಲ್ಲೆಯ ಪ್ರಮುಖ ಜಲಮೂಲವಾಗಿದ್ದು, ಸರೋವರದ ಸುತ್ತಲೂ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ. ಅಂತಹ ಯಾವುದೇ ಅಕ್ರಮ ನಿರ್ಮಾಣಗಳನ್ನು ಮುಲಾಜಿಲ್ಲದೇ ತೆರವುಗೊಳಿಸುತ್ತೇವೆ ಎಂದು ಹೇಳಿದರು.
6500 ಮಂದಿ ವಶಕ್ಕೆ
ಸೋಮವಾರದಂದು, ಪೊಲೀಸರು ಗುಜರಾತಿನಲ್ಲಿ ಕಠಿಣ ಕ್ರಮ ಕೈಗೊಂಡು ಬಾಂಗ್ಲಾದೇಶದ ನಾಗರಿಕರು ಎಂದು ಶಂಕಿಸಲಾದ ಸುಮಾರು 6,500 ಮುಸ್ಲಿಮರನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ ಸುಮಾರು 450 ಬಾಂಗ್ಲಾದೇಶಿ ಪ್ರಜೆಗಳು ಎಂದು ದೃಢಪಟ್ಟಿದ್ದು, ಬಾಕಿ ಇರುವವರ ಗುರುತು ಪತ್ತೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಡಿಜಿಪಿ ವಿಕಾಸ್ ಸಹಾಯ್ ಹೇಳಿದರು.
Advertisement