
ಮೀರತ್: ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಹೋಗುತ್ತಿದ್ದ ಭಾರತೀಯ ಸೇನೆ (Indian Army) ಯೋಧನ ಮೇಲೆ ಹಲ್ಲೆ ಮಾಡಿದ್ದ ಟೋಲ್ ಪ್ಲಾಜಾ ಸಿಬ್ಬಂದಿಗಳನ್ನು ಸ್ಥಳೀಯ ಗ್ರಾಮಸ್ಥರು ಒಗ್ಗೂಡಿ ಅಟ್ಟಾಡಿಸಿ ಹೊಡೆದಿರುವ ಘಟನೆ ವರದಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧ ಕಪಿಲ್ ಕವದ್ (Kapil Kavad) ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್ಗೇಟ್ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.
ಉತ್ತರ ಪ್ರದೇಶದ ಮೀರತ್ ನ ಸರೂರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಭೂನಿ ಟೋಲ್ ಪ್ಲಾಜಾ (Bhuni Toll Plaza)ದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು.
ಕ್ಷುಲ್ಲಕ ವಿಚಾರಕ್ಕೆ ಟೋಲ್ ಸಿಬ್ಬಂದಿಗಳಿಂದ ಯೋಧನ ಮೇಲೆ ಹಲ್ಲೆ
ಯೋಧ ಕಪಿಲ್ ತಮ್ಮ ಗ್ರಾಮದಿಂದ ಸ್ನೇಹಿತನ ಜೊತೆ ದೆಹಲಿಗೆ ಮರಳುತ್ತಿದ್ದ ವೇಳೆ ಕರ್ನಲ್ ಹೈವೇಯಲ್ಲಿರುವ ಟೋಲ್ ಪ್ಲಾಜಾದ ಬಳಿ ಸಮೀಪಿಸಿದಾಗ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಕಪಿಲ್ ವಿಳಂಬ ಮತ್ತು ಟೋಲ್ ಶುಲ್ಕ ವಿಚಾರವಾಗಿ ಟೋಲ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಿಯಮದ ಪ್ರಕಾರ ಟೋಲ್ ಗಳಲ್ಲಿ ವಿಳಂಬವಾದರೆ ಶುಲ್ಕ ಪಾವತಿಸುವಂತಿಲ್ಲ ಎಂದು ಕಪಿಲ್ ವಾದಿಸಿದ್ದು ಇದಕ್ಕೆ ಒಪ್ಪದ ಟೋಲ್ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ. ಒಂದು ಹಂತದಲ್ಲಿ ಈ ವಾಗ್ವಾದ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ.
ನೋಡ ನೋಡುತ್ತಲೇ ಟೋಲ್ ಸಿಬ್ಬಂದಿ ಯೋಧ ಕಪಿಲ್ ಮೇಲೆ ಹಲ್ಲೆ ಮಾಡಿದ್ದು, ಹತ್ತಾರು ಸಂಖ್ಯೆ ಸೇರಿದ್ದ ಟೋಲ್ ಸಿಬ್ಬಂದಿ ಯೋಧ ಕಪಿಲ್ ಕವದ್ ರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಟೋಲ್ ಸಿಬ್ಬಂದಿ ಯೋಧ ಕಪಿಲ್ ಮೇಲೆ ಕೈಯಿಂದ ಗುದ್ದುತ್ತಿರುವುದಲ್ಲದೇ ಒದೆಯುವುದು ಕೋಲಿನಿಂದ ಥಳಿಸುತ್ತಿರುವ ವಿಡಿಯೋ ದಾಖಲಾಗಿದೆ.
ವಿಡಿಯೋ ವೈರಲ್
ಟೋಲ್ ಸಿಬ್ಬಂದಿ ಯೋಧ ಕಪಿಲ್ ಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ವಿಡಿಯೋದಲ್ಲಿ ಒಂದು ಹಂತದಲ್ಲಿ ಓರ್ವ ಸಿಬ್ಬಂದಿ ಇಟ್ಟಿಗೆಯನ್ನು ಕೂಡ ಓರ್ವ ಕೈಯಲ್ಲಿ ಎತ್ತಿಕೊಂಡು ಹಲ್ಲೆಗೆ ಮುಂದಾಗುತ್ತಿರುವುದನ್ನು ಕಾಣಬಹುದು.
ಯೋಧನ ಮೇಲೆ ಹಲ್ಲೆಗೆ ತೀವ್ರ ಖಂಡನೆ
ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಅನೇಕರು ಯೋಧನ ಮೇಲೆ ಹಲ್ಲೆ ಆಗಿರುವುದಕ್ಕೆ ತೀವ್ರ ಆಕ್ರೋ ವ್ಯಕ್ತಪಡಿಸಿದ್ದಾರೆ. ಒಳಗಿದ್ದ ಇಂತಹವರಿಗೂ ಒಂದು ಆಪರೇಷನ್ ಸಿಂದೂರ್ ರೀತಿ ಆಗಬೇಕು ಎಂದು ಒಬ್ಬರು ಹೇಳಿದ್ದಾರೆ. ಇಂತಹ ದೇಶಕ್ಕಾಗಿ ಆ ಯೋಧ ಗಡಿಯಲ್ಲಿ ಹೊರಡುತ್ತಿದ್ದಾನೆ ಎಂತಹ ವಿಪರ್ಯಾಸ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಪೊಲೀಸ್ ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆಕಪಿಲ್ ಕುಟುಂಬದವರ ದೂರಿನ ಮೇರೆಗೆ ಸರೂರ್ಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಗಮನಿಸಿ ಪೊಲೀಸರು ಒಟ್ಟು ಆರು ಪ್ರಮುಖ ಶಂಕಿತರನ್ನು ಬಂಧಿಸಿದ್ದಾರೆ. ವೀಡಿಯೊದಲ್ಲಿ ಕಾಣುತ್ತಿರುವ ಇತರರಿಗೆ ಹುಡುಕಾಟ ನಡೆದಿದೆ.
ಗ್ರಾಮಸ್ಥರಿಂದ ಟೋಲ್ ಧ್ವಂಸ, ದಿಕ್ಕೆಟ್ಟು ಓಡಿದ ಸಿಬ್ಬಂದಿ
ಇನ್ನು ಯೋಧನ ಮೇಲಿನ ಟೋಲ್ ಸಿಬ್ಬಂದಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗುತ್ತಲೇ ಸಿಟ್ಟಿಗೆದ್ದ ಗ್ರಾಮಸ್ಥರು ಟೋಲ್ ಪ್ಲಾಜಾವನ್ನೇ ಧ್ವಂಸಗೊಳಿಸಿದ್ದಾರೆ. ಗ್ರಾಮಸ್ಥರು ಟೋಲ್ ಪ್ಲಾಜಾ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆಯೇ ಟೋಲ್ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಮೀರತ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ಕಪಿಲ್, ಸರೂರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಟ್ಕಾ ಗ್ರಾಮದ ನಿವಾಸಿಯಾಗಿದ್ದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾನಿ ಮಾಡುವ ಉದ್ದೇಶದಿಂದ ಆರಂಭವಾದ ಗಲಾಟೆ ನಂತರ ಹಲ್ಲೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
Advertisement