
ನವದೆಹಲಿ: ಭಾರತದ ಗಗನಯಾನ ಮಿಷನ್ ಬಗ್ಗೆ ಇಡೀ ವಿಶ್ವಕ್ಕೆ ಆಸಕ್ತಿ ಹೆಚ್ಚಾಗಿದ್ದು, ವಿಜ್ಞಾನಿಗಳು ಇದರ ಭಾಗವಾಗಲು ಉತ್ಸುಕರಾಗಿದ್ದಾರೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.
ನಿನ್ನೆ ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಅವರು, ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಆಕ್ಸಿಯಮ್ -4 ಮಿಷನ್ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ಕ್ಕೆ ತಮ್ಮ ಬಾಹ್ಯಾಕಾಶ ಪ್ರಯಾಣ, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮತ್ತು ಕಕ್ಷೆಯ ಪ್ರಯೋಗಾಲಯದಲ್ಲಿ ಅವರು ನಡೆಸಿದ ಪ್ರಯೋಗಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ್ರಧಾನ ಮಂತ್ರಿಯವರೊಂದಿಗಿನ ಶುಭಾಂಶು ಶುಕ್ಲಾ ಅವರ ಸಂವಾದದ ವೀಡಿಯೊವನ್ನು ಇಂದು ಹಂಚಿಕೊಳ್ಳಲಾಗಿದೆ.
ಭಾರತದ ಗಗನಯಾನ ಮಿಷನ್ ಬಗ್ಗೆ ಜನರು ತುಂಬಾ ಉತ್ಸುಕರಾಗಿದ್ದಾರೆ. ನನ್ನ ಅನೇಕ ಸಿಬ್ಬಂದಿ (ಆಕ್ಸಿಯಮ್ -4 ಮಿಷನ್ನ) ಉಡಾವಣೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು. ಗಗನಯಾನ ಮಿಷನ್ ಉಡಾವಣೆಗೆ ಆಹ್ವಾನಿಸಲಾಗುವುದು ಎಂದು ಸಹಿ ಮಾಡಿದ ಘೋಷಣೆಗಳನ್ನು ನನ್ನಿಂದ ತೆಗೆದುಕೊಂಡರು. ಅವರು ನಮ್ಮ ವಾಹನದಲ್ಲಿ ಪ್ರಯಾಣಿಸಲು ಬಯಸಿದ್ದರು ಎಂದು ಶುಭಾಂಶು ಶುಕ್ಲಾ ಅವರು ಹೇಳಿದ್ದಾರೆ.
ಈ ವೇಳೆ ಮೋದಿಯವರು ಭಾರತದ ಭವಿಷ್ಯದ ಬಾಹ್ಯಾಕಾಶ ಯಾನಗಳಿಗೆ 40-50 ಗಗನಯಾತ್ರಿಗಳ ಗುಂಪನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದು, ಈ ವೇಳೆ ಶುಕ್ಲಾ ಅವರು, ನಿಮ್ಮ ಗಗನಯಾನ ಮಿಷನ್ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
ಬಳಿಕ ಮೋದಿಯವರು ನಿಮ್ಮ ಗಗನಯಾನವು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತವು 2027 ರಲ್ಲಿ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಕೈಗೊಳ್ಳಲು ಮತ್ತು 2035 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸಿದೆ. 2040 ರ ವೇಳೆಗೆ ಚಂದ್ರನ ಮೇಲೆ ತನ್ನದೇ ಆದ ಗಗನಯಾತ್ರಿಯನ್ನು ಇಳಿಸುವ ಯೋಜನೆಯನ್ನೂ ಭಾರತ ಹೊಂದಿದೆ.
Advertisement