
ಲಖನೌ: ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿಯಾದ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಖಾತ್ರಿಪಡಿಸಬೇಕು ಎಂದು ಕಾಂಗ್ರೆಸ್ನ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅಜಯ್ ರೈ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅಮಿತ್ ಶಾ ಗೆ ಪತ್ರ ಬರೆದಿರುವ ಅಜಯ್ ರೈ, ಸಾರ್ವಜನಿಕ ಪ್ರತಿನಿಧಿಗಳು ನಾಗರಿಕರಿಗೆ ಸಿಗುವಂತಿರಬೇಕು. ಆದರೆ ಅವರ ಸುರಕ್ಷತೆಯು ಅಷ್ಟೇ ಮುಖ್ಯವಾಗಿದೆ ಎಂದಿದ್ದಾರೆ.
ನಮ್ಮ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವೈಯಕ್ತಿಕ ಭದ್ರತೆ ಅತ್ಯಂತ ಮಹತ್ವದ್ದಾಗಿದೆ. ಅವರು ಕಾಂಗ್ರೆಸ್ ಮತ್ತು ಭಾರತದ ರಾಜಕೀಯದಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಗಾಂಧಿಯವರು ಸಾರ್ವಜನಿಕರೊಂದಿಗೆ ನೇರ ಮಾತುಕತೆ ನಡೆಸುವ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅದರಲ್ಲಿ ಭಾರತ್ ಜೋಡೋ ಯಾತ್ರೆಯೂ ಪ್ರಮುಖವಾಗಿದೆ. ಸದ್ಯ ಅವರು ಬಿಹಾರದಲ್ಲಿ 'ಜನ್ ಅಧಿಕಾರ' ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಲಕ್ಷಾಂತರ ಜನರು ಸೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಅತ್ಯುನ್ನತ ಮಟ್ಟದ ವೈಯಕ್ತಿಕ ಭದ್ರತೆಯನ್ನು ತಪ್ಪದೆ ಒದಗಿಸುವುದು ಸೂಕ್ತ ಎಂದು ಅಜಯ್ ರೈ ಒತ್ತಾಯಿಸಿದ್ದಾರೆ.
Advertisement