

ನವದೆಹಲಿ: ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕಳೆದ ರಾತ್ರಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರಿ ಮೆನು ವಿಶೇಷವಾಗಿತ್ತು. ರಷ್ಯಾದ ಅಧ್ಯಕ್ಷರಿಗೆ ಸಾಂಪ್ರದಾಯಿಕ 'ಥಾಲಿ'ಯನ್ನು ಉಣಬಡಿಸಲಾಗಿದ್ದು, ಭಾರತದ ಪ್ರಾದೇಶಿಕ ತಿನಿಸುಗಳು ಮೇಳೈಸಿದ್ದವು.
ದಕ್ಷಿಣ ಭಾರತದ ಖಾದ್ಯಗಳು
ರಷ್ಯಾ ಅಧ್ಯಕ್ಷರಿಗೆ ತಯಾರಿಸಿದ ಭೋಜನದಲ್ಲಿ ದಕ್ಷಿಣ ಭಾರತದ ರಸಮ್ (ಸೂಪ್) ಮುರುಂಗೆಲೈ ಚಾರು ಸ್ಟಾರ್ಟ್ ಡಿಶ್ ಆಗಿತ್ತು. ಪುಟಿನ್ಗಾಗಿ ವಿಶೇಷವಾಗಿ ಮುರುಂಗೆಲೈ ಚಾರು ಎಂಬ ಚಳಿಗಾಲಕ್ಕೆ ಹೇಳಿ ಮಾಡಿಸಿದ ಬೆಚ್ಚಗಿನ ಸೂಪ್ನೊಂದಿಗೆ ಪ್ರಾರಂಭವಾಯಿತು.
ಕಾಶ್ಮೀರದಿಂದ ಪೂರ್ವ ಹಿಮಾಲಯದವರೆಗೆ ವಿಸ್ತರಿಸಿರುವ ಪಾಕಶಾಲೆಯಿಂದ ಹೆಕ್ಕಿ ತೆಗೆದ ಖಾದ್ಯಗಳನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ಅದೇ ರೀತಿ ಮುಖ್ಯ ಕೋರ್ಸ್ನಲ್ಲಿ ಜಫ್ರಾನಿ ಪನೀರ್ ರೋಲ್, ಪಾಲಕ್ ಮೇಥಿ ಮಟ್ಟರ್ ಕಾ ಸಾಗ್, ತಂದೂರಿ ಭರ್ವಾನ್ ಆಲೂ, ಆಚಾರಿ ಬೈಂಗನ್ ಮತ್ತು ಹಳದಿ ದಾಲ್ ತಡ್ಕಾ, ಜೊತೆಗೆ ಡ್ರೈ ಫ್ರೂಟ್ ಮತ್ತು ಕೇಸರಿ ಪುಲಾವ್ ಹಾಗೂ ಭಾರತೀಯ ಬ್ರೆಡ್ಗಳಾದ ಲಚ್ಚಾ ಪರಾಟಾ, ಮಗಜ್ ನಾನ್, ಸತಾನಾಜ್ ರೋಟಿ, ಮಿಸ್ಸಿ ರೋಟಿ ಮತ್ತು ಬಿಸ್ಕುಟಿಗಳನ್ನು ನೀಡಲಾಯಿತು.
ಮುಖ್ಯ ಭೋಜನವು ದಕ್ಷಿಣ ಭಾರತದ ರಸಂನಿಂದಲೇ ಆರಂಭವಾಗಿದ್ದು ವಿಶೇಷವಾಗಿತ್ತು. ನಂತರ ಕಾಶ್ಮೀರತಿ ವಾಲ್ನಟ್ ಚಟ್ನಿಯ ಗುಚ್ಚಿ ಡೂನ್ ಚೆಟಿನ್, ಮಸಾಲೆಯುಕ್ತ ವೆಜಿಟೇಬಲ್ ಕೋಲ್ ಮೊಮೊ ಮುಂತಾದ ವಿಶಿಷ್ಟ ಖಾದ್ಯಗಳನ್ನು ವ್ಲಾಡಿಮಿರ್ ಪುಟಿನ್ ಅವರಿಗೆ ಉಣಬಡಸಲಾಯಿತು.
ಸಿಹಿ ತಿಂಡಿಗಳಲ್ಲಿ ಬಾದಾಮ್ ಕಾ ಹಲ್ವಾ, ಕೇಸರ್-ಪಿಸ್ತಾ ಕುಲ್ಫಿ ಮತ್ತು ತಾಜಾ ಹಣ್ಣುಗಳು, ಸಾಂಪ್ರದಾಯಿಕ ಭಕ್ಷ್ಯಗಳಾದ ಗುರು ಸಂದೇಶ್, ಮುರಕ್ಕು ಮತ್ತು ವಿವಿಧ ರೀತಿಯ ಉಪ್ಪಿನಕಾಯಿ ಮತ್ತು ಸಲಾಡ್ಗಳು ಸೇರಿವೆ. ಪುಟಿನ್ ಅವರಿಗೆ ದಾಳಿಂಬೆ, ಕಿತ್ತಳೆ, ಕ್ಯಾರೆಟ್ ಮತ್ತು ಶುಂಠಿ ರಸಗಳ ಆರೋಗ್ಯಕರ ಮಿಶ್ರಣವನ್ನು ಸಹ ನೀಡಲಾಯಿತು.
ಊಟದ ಜೊತೆಗೆ ಸಂಗೀತ
ರಾಷ್ಟ್ರಪತಿ ಭವನದ ನೌಕಾ ತಂಡದವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ರಷ್ಯಾದ ಸಂಗೀತದೊಂದಿಗೆ ಸಂಯೋಜಿಸುವ ಸಂಗೀತ ಪ್ರದರ್ಶನವನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. 'ಅಮೃತವರ್ಷಿಣಿ', 'ಖಮಾಜ್', 'ಯಮನ್', 'ಶಿವರಂಜಿನಿ', 'ನಳಿನಕಾಂತಿ', 'ಭೈರವಿ' ಮತ್ತು 'ದೇಶ್' ಮುಂತಾದ ಭಾರತೀಯ ರಾಗಗಳು, ಕಾಲಿಂಕಾ ಮತ್ತು ಚೈಕೋವ್ಸ್ಕಿಯ ನಟ್ಕ್ರಾಕರ್ ಸೂಟ್ನ ಆಯ್ದ ಭಾಗಗಳು ಹಾಗೂ ಜನಪ್ರಿಯ ಹಿಂದಿ ಚಲನಚಿತ್ರ ರಾಗ 'ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಸೇರಿದಂತೆ ರಷ್ಯಾದ ರಾಗಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ, ಪುಟಿನ್ ಅವರು ಎರಡು ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು. ಪ್ರಧಾನಿ ಮೋದಿ ಅವರು ಅಳವಡಿಸಿಕೊಂಡ ಘೋಷಣೆಯು ರಾಜಕೀಯ, ಭದ್ರತೆ, ಆರ್ಥಿಕತೆ ಮತ್ತು ವ್ಯಾಪಾರ, ಇಂಧನ, ಶಿಕ್ಷಣ ಮತ್ತು ಇತರ ಕ್ಷೇತ್ರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಹಕಾರವನ್ನು ಒಳಗೊಂಡಿದೆ ಎಂದು ಹೇಳಿದರು. ನ್ಯಾಯಯುತವಾದ ವಿಶ್ವ ಕ್ರಮವನ್ನು ಸ್ಥಾಪಿಸಲು ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದರು.
ಭೋಜನದ ಬಳಿಕ ವ್ಲಾಡಿಮಿರ್ ಪುಟಿನ್ ಮರಳಿ ಮಾಸ್ಕೋದತ್ತ ಪ್ರಯಾಣ ಬೆಳೆಸಿದರು. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಪುಟಿನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
Advertisement