

ಮೊಹಾಲಿ: ಕಬಡ್ಡಿ ಪಂದ್ಯದ ವೇಳೆ ನಡೆದಿದ್ದ ಆಟಗಾರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಪಂಜಾಬ್ ಪೊಲೀಸರು ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ.
ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಮೊಹಾಲಿ ಪೊಲೀಸರು ಎರಡೇ ದಿನದಲ್ಲಿ ಪತ್ತೆ ಹಚ್ಚಿದ್ದಾರೆ. ವಶಕ್ಕೆ ಪಡೆಯಲು ಹೋದಾಗ ನಡೆಸಿದ ಗುಂಡಿನ ಚಕಮಕಿಯಲ್ಲಿ ಆರೋಪಿ ಮಿದ್ದುನ ಹತ್ಯೆ ಮಾಡಲಾಗಿದೆ.
ಹರ್ಪಿಂದರ್ ಅಲಿಯಾಸ್ ಮಿದ್ದು ಕಬಡ್ಡಿ ಪಟು ರಾಣಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ವಾಹನ ಮೂಲಕ ಕಬಡ್ಡಿ ಟೂರ್ನಿ ಆಯೋಜನೆ ಬಳಿ ಬಂದ ಹರ್ಪಿಂದರ್ ಅಲಿಯಾಸ್ ಮಿದ್ದು ಹಾಗೂ ಸಹಚರರು ಏಕಾಏಕಿ ತೀರಾ ಹತ್ತಿರದಿಂದಲೇ ಕಬ್ಬಡ್ಡಿ ಆಟಗಾರ ರಾಣಾ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಹೀಗಾಗಿ ರಾಣಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯ, ಮೊಬೈಲ್ ಮೂಲಕ ದಾಖಲಾಗಿರುವ ದೃಶ್ಯ, ಕಬಡ್ಡಿ ನೇರ ಪ್ರಸಾದ ದೃಶ್ಯಗಳನ್ನು ಕಲೆ ಹಾಕಿದ್ದರು. ಬಳಿಕ ತನಿಖೆ ತೀವ್ರಗೊಂಡಿತ್ತು.
ಪೊಲೀಸ್ ಎನ್ಕೌಂಟರ್
ಇಂದು ಮೊಹಾಲಿಯ ಹೊರವಲಯದ ತರ್ನ ತರಾನ್ ಪ್ರದೇಶದಲ್ಲಿ ಪೊಲೀಸರು ಕಾರ್ಯಚರಣೆ ತೀವ್ರಗೊಳಿಸಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಆರೋಪಿ ಮಿದ್ದು ಹತ್ಯೆಯಾಗಿದ್ದಾನೆ. ಆರೋಪಿ ಮಿದ್ದು ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿರುವುದಾಗಿ ಮೊಹಾಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಪಿಂದರ್ ಅಲಿಯಾಸ್ ಮಿದ್ದುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬದುಕುಳಿಯಲಿಲ್ಲ.
ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಆರೋಪ
ಇನ್ನು ಎನ್ಕೌಂಟರ್ ನಲ್ಲಿ ಹತನಾದ ಆರೋಪಿ ಹರ್ಪಿಂದರ್ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಪೊಲೀಸ್ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಘಟನೆ?
ಕಬಡ್ಡಿ ಪಂದ್ಯದ ಟಾಸ್ ಮುಗಿಸಿ ಇನ್ನೇನು ಪಂದ್ಯ ಆರಂಭಗೊಳ್ಳಬೇಕು ಅನ್ನುವಷ್ಟರಲ್ಲೇ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಖ್ಯಾತ ಕಬಡ್ಡಿ ಪಟು ರಾಣಾ ಬಾಲಚೌರಿಯಾ ಸ್ಥಳದಲ್ಲೇ ಮೃತಟ್ಟಿದ್ದರು. ಪಂಜಾಬ್ನ ಮೊಹಾಲಿಯಲ್ಲಿ ನಡೆದ ಈ ಹತ್ಯೆ ಪ್ರಕರಣ ದೇಶದಲ್ಲೇ ಆತಂಕ ಹೆಚ್ಚಿಸಿತ್ತು. ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕ್ರೀಡಾಭಿಮಾನಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಇತ್ತ ಸಹ ಆಟಗಾರರು ಆತಂಕಕ್ಕೊಳಗಾಗಿದ ಘಟನೆ ನಡೆದಿತ್ತು.
ಸ್ಟಾರ್ ಆಟಗಾರ, ಆಯೋಜಕ
ರಾಣಾ ಬಾಲಚೌರಿಯಾ ಮೊಹಾಲಿಯ ಖ್ಯಾತ ಕಬಡ್ಡಿ ಪಟು ಹಾಗೂ ಕಬಡ್ಡಿ ಆಯೋಜಕನಾಗಿ ಗುರುತಿಸಿಕೊಂಡಿದ್ದ. ಸೋಮವಾರ ಮೊಹಾಲಿಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಿದ್ದ ರಾಣಾ ಸ್ವತಃ ಕಬಡ್ಡಿ ಪಟುವಾಗಿ ಅಂಗಣಕ್ಕಿಳಿದಿದ್ದ. ತಂಡದ ನಾಯಕನಾಗಿದ್ದ ರಾಣಾ ಟಾಸ್ ಪ್ರಕ್ರಿಯೆ ಮುಗಿಸಿ ವಾರ್ಮ್ ಅಪ್ನಲ್ಲಿ ತೊಡಗಿಸಿಕೊಂಡಿದ್ದ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭಗೊಳ್ಳಬೇಕಿತ್ತು. ಉಭಯ ತಂಡದ ಸದಸ್ಯರು ವಾರ್ಮ್ ಅಪ್ನಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಅಪರಿಚಿತರಾಗಿ ಬಂದ ಹರ್ಪಿಂದರ್ ಹಾಗೂ ಆತನ ಸಹಚರರು ರಾಣಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹಲವು ಸುತ್ತು ಗುಂಡು ಹಾರಿಸಿದ್ದರು. ಹೀಗಾಗಿ ರಾಣ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.
Advertisement