

ನವದೆಹಲಿ: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರು ವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನಲ್ಲಿ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ನ ರಜಾಕಾಲದ ತ್ರಿಸದಸ್ಯ ವಿಶೇಷ ಪೀಠವು ಸೋಮವಾರ ತಡೆ ಹಿಡಿದಿದೆ.
ಇದನ್ನು ಆಗಿನ CJI ಬಿ ಆರ್ ಗವಾಯಿ ಅವರು ನೀಡಿದ್ದರು. ರಾಜಸ್ಥಾನ, ಗುಜರಾತ್ , ಹರಿಯಾಣದಲ್ಲಿರುವ ಅರಾವಳಿ ಜಿಲ್ಲೆಗಳಲ್ಲಿನ ನೂರು ಮೀಟರ್ ಮತ್ತು ಅದಕ್ಕಿಂತ ಎತ್ತರದ ಭೂ ಪ್ರದೇಶಗಳನ್ನು ಅರಾವಳಿ ಬೆಟ್ಟಗಳು ಮತ್ತು 500 ಮೀಟರ್ ಅಂತರದಲ್ಲಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ಅರಾವಳಿ ಶ್ರೇಣಿಗಳೆಂದು ಪರಿಗಣಿಸಬೇಕು ಎಂದು ಮರು ವ್ಯಾಖ್ಯಾನ ಮಾಡಿದ್ದರು.
ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರು ವ್ಯಾಖ್ಯಾನ ಕುರಿತು ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್, ಸೋಮವಾರ ಈ ಆದೇಶ ನೀಡಿತು.
ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್, ಕೇಂದ್ರ ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ. ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ರಜಾ ಪೀಠ ಪ್ರಸ್ತಾಪಿಸಿತು.
ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ, ನವೆಂಬರ್ 20 ತೀರ್ಪಿನಲ್ಲಿ ಸರ್ಕಾರದ ಪಾತ್ರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಕಲ್ಪನೆಗಳಿವೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದರು. ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ವರದಿಯನ್ನು ನೀಡಲಾಗಿದೆ. ಅದನ್ನು ನ್ಯಾಯಾಲಯವು ಅಂಗೀಕರಿಸಿದೆ ಎಂದು ಮೆಹ್ತಾ ಹೇಳಿದರು.
Advertisement