

ವಿಶಾಖಪಟ್ಟಣಂ: ಆಂಧ್ರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ದುರಂತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಸುಮಾರು 66 ಕಿ.ಮೀ ದೂರದಲ್ಲಿರುವ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್ಪ್ರೆಸ್ನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರೈಲಿನೊಳಗಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರೈಲಿನ (ಸಂಖ್ಯೆ 18189) ಬಿ1 ಮತ್ತು ಎಂ2 ಬೋಗಿಗಳು ಬೆಂಕಿಗೆ ಆಹುತಿಯಾದವು ಮತ್ತು ರೈಲ್ವೆ ಸಿಬ್ಬಂದಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ರೈಲ್ವೆ ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿ ಪ್ರಯಾಣಿಕರನ್ನು ರೈಲಿನಿಂದ ಇಳಿಸುವಲ್ಲಿ ಸಹಾಯ ಮಾಡಿದರು. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿತು ಎಂದು ದಕ್ಷಿಣ ಮಧ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಕಿಯ ಬಗ್ಗೆ ಪೊಲೀಸರಿಗೆ ಬೆಳಿಗ್ಗೆ 12.45 ಕ್ಕೆ ಮಾಹಿತಿ ಸಿಕ್ಕಿತು. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು. ಪೈಕಿ ಬಿ 1 ಬೋಗಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದ್ದಾರೆ.
ಬೆಂಕಿ ಅವಘಡದಿಂದ ಹಾನಿಗೊಳಗಾದ ಎರಡು ಬೋಗಿಗಳನ್ನು ಎರ್ನಾಕುಲಂ ಕಡೆಗೆ ಸಾಗುತ್ತಿದ್ದ ರೈಲಿನಿಂದ ಬೇರ್ಪಡಿಸಲಾಗಿದೆ. ಹಾನಿಗೊಳಗಾದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಕಳುಹಿಸಲಾಗುವುದು. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಎರಡು ವಿಧಿವಿಜ್ಞಾನ ತಂಡಗಳು ಕೆಲಸ ಮಾಡುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಾನಿಗೊಳಗಾದ ಬೋಗಿಗಳ ಬೇರ್ಪಡಿಸಿದ ಸಿಬ್ಬಂದಿ
ಇನ್ನು ಮುನ್ನೆಚ್ಚರಿಕೆಯಾಗಿ, ಹಾನಿಗೊಳಗಾದ ಎರಡೂ ಬೋಗಿಗಳು ಮತ್ತು ಹೆಚ್ಚುವರಿ ಎಸಿ III ಟೈಯರ್ ಕೋಚ್ (ಎಂ1) ಅನ್ನು ಬೇರ್ಪಡಿಸಲಾಯಿತು. ಉಳಿದ ಬೋಗಿಗಳನ್ನು ಪ್ರಸ್ತುತ ಸಮಲ್ಕೋಟ್ ರೈಲು ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಅಲ್ಲಿ ಮೂರು ಖಾಲಿ ಬದಲಿ ಬೋಗಿಗಳನ್ನು ರಚನೆಗೆ ಜೋಡಿಸಲಾಗುತ್ತದೆ. ಅಂತೆಯೇ ತೊಂದರೆಗೊಳಗಾದ ಬೋಗಿಗಳಿಂದ ಪ್ರಯಾಣಿಕರನ್ನು ಬಸ್ ಗಳ ಮೂಲಕ ಸಮಲ್ಕೋಟ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೇ ಸುರಕ್ಷತಾ ಆಯುಕ್ತರು ಮತ್ತು ದಕ್ಷಿಣ ಮಧ್ಯ ರೈಲ್ವೆಯ ಇತರ ಹಿರಿಯ ಅಧಿಕಾರಿಗಳು ಬೆಂಕಿಯ ಕಾರಣವನ್ನು ನಿರ್ಧರಿಸಲು ಮತ್ತು ಯಾವುದೇ ಸಾವುನೋವುಗಳನ್ನು ನಿರ್ಣಯಿಸಲು ವಿಧಿವಿಜ್ಞಾನ ಮತ್ತು ವೈದ್ಯಕೀಯ ತಂಡಗಳ ಜೊತೆಗೆ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳೀಯ ಆಡಳಿತದೊಂದಿಗೆ ಸಮನ್ವಯದೊಂದಿಗೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಸಹಾಯ ಮತ್ತು ರೈಲು ಚಾಲನೆಯ ಮಾಹಿತಿಯನ್ನು ಒದಗಿಸಲು ಎಸ್ಸಿಆರ್ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Advertisement