
ಲಖನೌ: ಭಾವನೇ ಸುಪಾರಿ ಕೊಟ್ಟು ನಾದಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿ, ಕೊಲೆ ಮಾಡಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಮುಜಫರ್ ನಗರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಬ್ಬರು ಸುಪಾರಿ ಹಂತಕರ ಜೊತೆ ಸೇರಿಕೊಂಡು ಭಾವನೇ ನಾದಿನಿಯ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಗೊಳಿಸಲು ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಆಶೀಷ್ ಕುಮಾರ್ ಎಂದು ಗುರುತಿಸಲಾಗಿದ್ದು, ಹಂತಕರಾದ ಶುಭಂ ಮತ್ತು ದೀಪಕ್ ಅವರು ತಲೆಮರೆಸಿಕೊಂಡಿದ್ದಾರೆ.
ಬುಧಾನ ಪ್ರದೇಶದ ನಿವಾಸಿಯಾಗಿದ್ದ ಸಂತ್ರಸ್ತೆಯು, 2024ರ ಡಿಸೆಂಬರ್ 21ರಂದು ಕಾಣೆಯಾಗಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ, ಆಶಿಷ್ ಹಾಗೂ ಆತನ ಇಬ್ಬರು ಸ್ನೇಹಿತರೊಂದಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಅದರಂತೆ, ಆಶಿಷ್ನನ್ನು ವಿಚಾರಣೆಗೆ ಒಳಪಡಿಸಿದಾಗ, ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ, ಸರ್ಧಾನ ಪ್ರದೇಶದಲ್ಲಿ ಮೂಳೆಗಳನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆಶಿಷ್, ಕೊಲೆಯಾದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಆಕೆ, ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದರಿಂದ ಬೇಸತ್ತು ಕೊಲೆ ಮಾಡಲು ಇಬ್ಬರು ಯುವಕರನ್ನು ಸಂಪರ್ಕಿಸಿದ್ದೆ. ಸುಪಾರಿ ಹಂತಕರಿಗೆ 20 ಸಾವಿರ ರೂ. ಮುಂಗಡ ಹಣ ನೀಡಿದ್ದೆ. ಹತ್ಯೆ ನಂತರ 20 ಸಾವಿರ ರೂ.ಗಳನ್ನು ನೀಡಿದ್ದೆ ಎಂದು ಹೇಳಿಕೊಂಡಿದ್ದಾನೆ.
ಯೋಜನೆಯಂತೆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ, ಕತ್ತು ಹಿಸುಕಿ ಕೊಲೆ ಮಾಡಿದ್ದು, ಶವದ ಗುರುತು ಸಿಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿ ಅಪರಾಧಿಗಳಿಗೆ ಶಿಕ್ಷೆ ಖಚಿತಪಡಿಸಲಾಗುವುದು. ಪರಾರಿಯಾಗಿರುವ ಇಬ್ಬರು ಅಪರಾಧಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮುಜಫರ್ನಗರ ಗ್ರಾಮೀಣ ಪೊಲೀಸರ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಹೇಳಿದ್ದಾರೆ.
Advertisement