
ನವದೆಹಲಿ: ದೆಹಲಿ ಚುನಾವಣೆಯಲ್ಲಿ INDIA ಒಕ್ಕೂಟದ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಸೋಲಿನ ಬೆನ್ನಲ್ಲೇ ಇದೀಗ ಒಕ್ಕೂಟದ ವಿರುದ್ಧವಾಗಿಯೇ ಟೀಕೆಗಳು ಕೇಳಿ ಬರುತ್ತಿವೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದು, ಇದೇ ದೆಹಲಿಯಲ್ಲಿ ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಮೂರನೇ ಬಾರಿಗೆ ಶೂನ್ಯ ಸಾಧನೆಗೈದಿದೆ. ಆ ಮೂಲಕ ಕಾಂಗ್ರೆಸ್ ಶೂನ್ಯ ಸಾಧನೆಯಲ್ಲೂ ಹ್ಯಾಟ್ರಿಕ್ ಸಾಧಿಸಿದೆ.
ಬಿಜೆಪಿ ನಿಯಂತ್ರಿಸುವಲ್ಲಿ INDIA ವಿಫಲ?
ಇನ್ನು ಜೂನ್ 2023 ರಲ್ಲಿ ಬಿಜೆಪಿಯನ್ನು ನಿಯಂತ್ರಿಸುವ ಮತ್ತು ಸೋಲಿಸುವ ಏಕೈಕ ಗುರಿಯೊಂದಿಗೆ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ ಇಂಡಿಯಾ ಒಕ್ಕೂಟ ಈ ಅವಧಿಯಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಕೂಟ ಎನ್ ಡಿಎಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. 2023 ಜೂನ್ ಬಳಿಕ ನಡೆದ ಚುನಾವಣೆಗಳ ಪೈಕಿ 13 ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಅಥವಾ ಅದರ ಮಿತ್ರಕೂಟ NDA ಗೆದ್ದಿದೆ.
ಕಳೆದ ವರ್ಷಾಂತ್ಯದಲ್ಲಿ ನಡೆದ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಕೂಟದ ಪಕ್ಷಗಳು ಆಂತರಿಕ ಕಲಹದಿಂದಾಗಿ ಸೋಲು ಕಂಡಿದ್ದವು. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಮತ್ತು ಎಎಪಿ ಬಣದ ಆಂತರಿಕ ಕಲಹ ಕಾಂಗ್ರೆಸ್ ನಾಯಕತ್ವವನ್ನು ಮತ್ತಷ್ಟು ಎತ್ತಿ ತೋರಿಸಿದವು.
ದೆಹಲಿಯಲ್ಲೂ ಸೀಟು ಹಂಚಿಕೆ ವಿಚಾರವಾಗಿ ನಡೆದ ಗೊಂದಲ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುವಂತೆ ಮಾಡಿದವು. ಒಂದು ಹಂತದಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ಬಹಿರಂಗವಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಮಾಡಿಕೊಂಡಿವೆ ಎಂದು ಆರೋಪಿಸಿದ್ದರು. ಇದು ಇಂಡಿಯಾ ಕೂಟದ ಆಂತರಿಕ ಕಲಹ ಜಗಜ್ಜಾಹಿರಾಗುವಂತೆ ಮಾಡಿತು.
ಅಲ್ಲದೆ ಯಮುನಾ ನದಿಯಲ್ಲಿ ವಿಷ ಬೆರೆಸುತ್ತಿದ್ದಾರೆ ಎಂಬ ಕೇಜ್ರಿವಾಲ್ ಆರೋಪವನ್ನು ಸ್ವತ- ರಾಹುಲ್ ಗಾಂಧಿ ಟೀಕಿಸಿದ್ದರು. ಮದ್ಯ ನೀತಿ ಹಗರಣದ ಬಗ್ಗೆಯೂ ಕಾಂಗ್ರೆಸ್ ನಾಯಕರು ಎಎಪಿಯನ್ನು ಟೀಕಿಸಿದ್ದರು. ಇದಕ್ಕೂ ಮುನ್ನ ಅತ್ತ ಬಂಗಾಳದಲ್ಲಿ ನಡೆದ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಇಂಡಿಯಾ ಮಿತ್ರಕೂಟದ ಪಕ್ಷಗಳಾದ ಟಿಎಂಸಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.
Advertisement