
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಪಕ್ಷಗಳ ಪ್ರಚಾರ ಆರಂಭವಾಗಿರುವಂತೆಯೇ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದೆ.
ಅರವಿಂದ್ ಕೇಜ್ರಿವಾಲ್ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಾಗ ಅವರ ಕಾರ್ ಮೇಲೆ ದಾಳಿ ನಡೆದಿದೆ ಎಂದು ಎಎಪಿ ಆರೋಪಿಸಿದೆ. ಫೆಬ್ರವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸದ್ಯ ಪ್ರಚಾರದ ಅಖಾಡಕ್ಕೆ ಇಳಿದಿವೆ. ಅದೇ ರೀತಿ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕೂಡ ಇಂದು ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಅವರ ಕಾರಿನ ಮೇಲೆ ಕಲ್ಲೆಸೆದು ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ವಿಡಿಯೋ ಸಮೇತ ಆರೋಪ ಮಾಡಿರುವ ಎಎಪಿ, 'ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ಕಲ್ಲೆಸೆದಿದ್ದು, ಆ ಮೂಲಕ ನಮ್ಮ ಪ್ರಚಾರದ ಕಾರ್ಯಕ್ರಮವನ್ನು ಹಾಳುಗೆಡುವಲು ಪ್ರಯತ್ನಿಸಿದೆ. ಈ ನಿಮ್ಮ ಹೇಡಿತನದ ದಾಳಿಗಳಿಗೆ ಕೇಜ್ರಿವಾಲ್ ಹೆದರುವುದಿಲ್ಲ. ದೆಹಲಿಯ ಜನರು ಈ ಒಂದು ಕೃತ್ಯಕ್ಕೆ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಆಪ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ವಿಡಿಯೋ ಅಪ್ಲೋಡ್ ಮಾಡಿರುವ ಎಎಪಿ
ಇನ್ನು ವೈರಲ್ ಆದ ವಿಡಿಯೋದಲ್ಲಿ ಕೆಲ ಯುವಕರು ಕಪ್ಪು ಬಾವುಟ ಪ್ರದರ್ಶಿಸಿ ಕೇಜ್ರಿವಾಲ್ ಕಾರಿಗೆ ಅಡ್ಡಿಪಡಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಇದನ್ನು ಬಿಜೆಪಿ ನಮ್ಮ ಪ್ರಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದು ಆಪ್ ಆರೋಪಿಸಿದೆ. ಇದೇ ಘಟನೆಯಲ್ಲೇ ವ್ಯಕ್ತಿಯೋರ್ವ ಕೇಜ್ರಿವಾಲ್ ಕಾರಿನ ಮೇಲೆ ವ್ಯಕ್ತಿಯೋರ್ವ ಕಲ್ಲೆಸೆದಿರುವ ಕೃತ್ಯವನ್ನೂ ಆಪ್ ತೋರಿಸಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಒಂದು ವಿಡಿಯೋ ಶೇರ್ ಮಾಡಿದ್ದು, ಕೇಜ್ರಿವಾಲ್ ಬೆಂಗಾವಲು ಪಡೆಯ ವಾಹನ ಪ್ರಚಾರದ ವೇಳೆ ಇಬ್ಬರು ವ್ಯಕ್ತಿಗಳ ಮೇಲೆ ಹರಿದುಕೊಂಡು ಹೋಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಗೂಂಡಾಗಳಿಂದ ಕೃತ್ಯ
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರ ಗುಂಡಾಗಳು ಕೇಜ್ರಿವಾಲ್ ಕಾರಿನ ಮೇಲೆ ಕಲ್ಲೆಸೆದು ಅವರನ್ನು ಗಾಯಗೊಳಿಸಿ, ಪ್ರಚಾರದ ಕಣಕ್ಕೆ ಇಳಿಯದಂತೆ ಮಾಡಬೇಕು ಎಂದು ಷಡ್ಯಂತ್ರ ರಚಿಸಿದ್ದಾರೆ. ಸೋಲಿನ ಭಯದಿಂದ ಬಿಜೆಪಿ ಭಯಭೀತರಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದಾಳಿ ಮಾಡಲು ತನ್ನ ಗೂಂಡಾಗಳನ್ನು ಕಳುಹಿಸಿತು.
ಆರೋಪ ಅಲ್ಲಗಳೆದ ಬಿಜೆಪಿ
ಇನ್ನು ಎಎಪಿ ಆರೋಪವನ್ನು ಬಿಜೆಪಿ ಅಲ್ಲಗಳೆದಿದ್ದು, ಮಾತ್ರವಲ್ಲದೇ ಕೇಜ್ರಿವಾಲ್ ಕಾರು ಇಬ್ಬರು ಯುವಕರಿಗೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಪ್ರವೇಶ್ ವರ್ಮಾ, 'ಆಪ್ ಸರ್ಕಾರದ ದುರಾಡಳಿತಗಳ ಕುರಿತು ಜನರು ಪ್ರಶ್ನೆಗಳನ್ನು ಕೇಳುತ್ತಿರುವಾಗ ಅದಕ್ಕೆ ಉತ್ತರಿಸಲಾಗದ ಕೇಜ್ರಿವಾಲ್ ಕಾರಿನಿಂದ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಅವರ ಕಾರು ಇಬ್ಬರು ಯುವಕರಿಗೆ ಢಿಕ್ಕಿಯಾಗಿದೆ. ಗಾಯಗೊಂಡ ಇಬ್ಬರನ್ನೂ ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತಾಶೆಯಲ್ಲಿ, ಅವರು ಜನರ ಜೀವನದ ಮೌಲ್ಯವನ್ನು ಮರೆತಂತೆ ತೋರುತ್ತದೆ. ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ" ಎಂದು ವರ್ಮಾ ಎಕ್ಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವರ್ಮಾ, ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಎಲ್ಲರೂ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೂವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಮತ್ತು ತಮ್ಮ ಪಕ್ಷಗಳ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಇನ್ನು ಈ ಘಟನೆ ಕುರಿತು ಬಿಜೆಪಿ ಮತ್ತು ಎಎಪಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವಂತೆಯೇ ಇತ್ತ ದೆಹಲಿ ಪೊಲೀಸರು ಕೇಜ್ರಿವಾಲ್ ಕಾರಿನ ಮೇಲಿನ ದಾಳಿಯನ್ನು ಅಲ್ಲಗಳೆದಿದ್ದಾರೆ. ಕೇಜ್ರಿವಾಲ್ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಲಾಲ್ ಬಹದ್ದೂರ್ ಸದನ್ ನಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದ್ದಾಗ ಕೆಲವು ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಆಗಮಿಸಿದ್ದು, ಕೆಲವು ಪ್ರಶ್ನೆ ಗಳನ್ನು ಕೇಳಲು ಬಯಸಿದರು. ಇದರಿಂದ ಎರಡು ಬದಿಯವರೂ ಘೋಷಣೆಗಳನ್ನು ಕೂಗಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ಗುಂಪುಗಳನ್ನು ಸ್ಥಳದಿಂದ ಚದುರಿಸಿದರು ಎನ್ನಲಾಗಿದೆ.
Advertisement