
ಚೆನ್ನೈ: ತಮಿಳುನಾಡು ಎರಡು ದಶಕಗಳ ಹಿಂದೆಕ್ಕೆ ಹೋಗಿದೆ. ರಾಜ್ಯವು ಈಗ ಸೂಸ್ಥಿತಿಯಲ್ಲಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಮಂಗಳವಾರ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಥಿಂಕ್ ಎಡು ಕಾನ್ಕ್ಲೇವ್ 2025 ರಲ್ಲಿ ಮಾತನಾಡಿದ ಅಣ್ಣಾಮಲೈ, ತಳಮಟ್ಟದಲ್ಲಿ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳುತ್ತಿದ್ದು, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದ್ರಾವಿಡ ಪಕ್ಷಗಳಂತಹ ಪ್ರಮುಖ ಸಾಂಸ್ಕೃತಿಕ ಐಕಾನ್ ಗಳಿಲ್ಲದೆ ರಾಜ್ಯದಲ್ಲಿ ಬಿಜೆಪಿ ತಡವಾಗಿ ಆರಂಭವಾಗಿದೆ ಎಂದು ಒಪ್ಪಿಕೊಂಡ ಅವರು, ದ್ರಾವಿಡ ರಾಜಕೀಯ ಪಕ್ಷಗಳ ಸಾಂಸ್ಕೃತಿಕ ಐಕಾನ್ ಗಳು ಸಹ ಈಗ ಹಳೆಯದಾಗಿವೆ ಎಂದು ವಾದಿಸಿದರು.
ರಾಜಕೀಯದಲ್ಲಿ ಜನರು ಪರ್ಯಾಯ ಚರ್ಚೆಗಾಗಿ ಕಾಯುತ್ತಿದ್ದಾರೆ ಮತ್ತು ತಮಿಳುನಾಡಿನ ವೈಭವವನ್ನು ಮತ್ತು ಅದರ ಆರ್ಥಿಕತೆಯನ್ನು ಪುನಃಸ್ಥಾಪಿಸಲು ಬದಲಾವಣೆಯ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಥಿಂಕ್ಎಡು ಸಮಾವೇಶದ ಎರಡನೇ ದಿನದವಾದ ಇಂದು ಅಣ್ಣಾಮಲೈ ಅವರು ವೇದಿಕೆಯ ಮೇಲೆ ಬರಿಗಾಲಿನಲ್ಲಿ ಕಾಣಿಸಿಕೊಂಡರು. ಒಂದು ತಿಂಗಳ ಹಿಂದೆ ನಡೆದ ಅಣ್ಣಾ ವಿಶ್ವವಿದ್ಯಾಲಯದ ಅತ್ಯಾಚಾರ ಪ್ರಕರಣದ ನಂತರ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಅಣ್ಣಾಮಲೈ ಪ್ರತಿಜ್ಞೆ ಮಾಡಿದ್ದಾರೆ.
ಟಿಎನ್ಐಇ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರು ಚಪ್ಪಲಿ ಧರಿಸದಿರುವ ನಿರ್ಧಾರದ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಣ್ಣಾಮಲೈ, ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವುದು ತಮಿಳುನಾಡಿನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಮತ್ತು ಜನರೊಂದಿಗೆ ನಿಲ್ಲಲು ಮತ್ತು ಅವರ ಹೋರಾಟಗಳೊಂದಿಗೆ ಸಂಪರ್ಕ ಸಾಧಿಸಲು ಇದು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದರು.
"ನಾನು ನನ್ನ ಹಳ್ಳಿಗೆ ಭೇಟಿ ನೀಡಿದಾಗಲೂ, ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳ ಭಾಗವಾಗಿ ಜನರು ಚಾಟಿಯೇಟು ಹೊಡೆಯುವ ಮೂಲಕ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುವುದನ್ನು ನಾನು ನೋಡುತ್ತೇನೆ" ಎಂದು ಅಣ್ಣಾಮಲೈ ಹೇಳಿದರು.
Advertisement