
ಮುಂಬೈ: ಮುಂಬೈ ಶಾಸಕರ ವಸತಿ ಗೃಹದಲ್ಲಿರುವ ಕ್ಯಾಂಟೀನ್ನಲ್ಲಿ ಹಳಸಿದ ಆಹಾರ ನೀಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕ್ಯಾಂಟೀನ್ ಪರವಾನಗಿ ರದ್ದುಗೊಳಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ನಿಮಿತ್ತ ಶಾಸಕರೆಲ್ಲರೂ ಮುಂಬೈಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಎಲ್ಎ ಗೆಸ್ಟ್ಹೌಸ್ನಲ್ಲಿ ತಂಗಿದ್ದ, ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಅವರು ಹಳಸಿದ ಆಹಾರ ನೀಡಿದ್ದಾರೆಂದು ಕ್ಯಾಂಟೀನ್ ಸಿಬ್ಬಂದಿಗಳನ್ನು ಥಳಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ಕ್ಯಾಂಟೀನ್ ಆಹಾರ ಕುರಿತು ದೂರನ್ನೂ ಶಾಸಕರು ನೀಡಿದ್ದರು.
ದೂರು ಪರಿಗಣಿಸಿ ಎಫ್ಡಿಎ ತುರ್ತು ಕ್ರಮ ಕೈಗೊಂಡಿದೆ. ಇದರಂತೆ ಅಜಂತಾ ಕ್ಯಾಟರರ್ಸ್ ಅನ್ನು ಅಮಾನತು ಮಾಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಪ್ರಮುಖ ನಿಬಂಧನೆಗಳನ್ನು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಗಳು, 2011 ಅನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಪನೀರ್, ಶೇಜ್ವಾನ್ ಚಟ್ನಿ, ಎಣ್ಣೆ ಮತ್ತು ತೊಗರಿ ಬೇಳೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. 14 ದಿನಗಳಲ್ಲಿ ವರದಿ ಬರಲಿದೆ ಎಂದು ಎಫ್ಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಕ್ಷಮೆಯಾಚಿಸಲು ನಿರಾಕರಿಸಿರುವ ಶಾಸಕ, ಕ್ಯಾಂಟೀನ್ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರೂ ಯಾವುದೇ ಸರಿಪಡಿಸುವ ಕ್ರಮ ಕೈಗೊಂಡಿಲ್ಲ. ನಾನು ಮಾಡಿದ ಕೆಲಸಕ್ಕೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಶಾಸಕರ ವರ್ತನೆಯನ್ನು ಖಂಡಿಸಿದ್ದಾರೆ. ಎಲ್ಲಾ ಶಾಸಕರಿಂದಲೂ ಅಧಿಕಾರ ದುರುಪಯೋಗವಾಗುತ್ತಿದೆ ಎಂಬ ತಪ್ಪು ಸಂದೇಶ ಜನರಲ್ಲಿ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿ, ಸಮಸ್ಯೆಗಳಿದ್ದರೆ, ಕಾನೂನು ಕ್ರಮ ಕೈಗೊಳ್ಳಬಹುದು, ಆದರೆ, ಹಲ್ಲೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
Advertisement