
ಇಂದೋರ್: ಧಾರ್ಮಿಕ ಮೂಲಭೂತಕ್ಕೆ ಮಂಗಳಮುಖಿಯರೂ ಹೊರತಾಗಿಲ್ಲ ಎಂಬುದಕ್ಕೆ ಇಂದೋರ್ ನಲ್ಲಿ ನಡೆದ ವಿಲಕ್ಷಣ ಘಟನೆ ಸಾಕ್ಷಿಯಾಗಿದ್ದು, Hindu ಮಂಗಳಮುಖಿಯರು ಇಸ್ಲಾಂಗೆ ಮತಾಂತರವಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೇ ಅವರಿಗೆ HIV ಚುಚ್ಚುಮದ್ದು ಚುಚ್ಚಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಮಧ್ಯಪ್ರದೇಶದ ಇಂದೋರ್ನ ನಂದಲಾಲ್ಪುರ ಪ್ರದೇಶದಲ್ಲಿ ಮಂಗಳಮುಖಿ ಸಮುದಾಯದೊಳಗೆ ತೀವ್ರ ಸಂಘರ್ಷ ಮತ್ತು ಆಘಾತಕಾರಿ ಆರೋಪಗಳು ಬೆಳಕಿಗೆ ಬಂದಿದ್ದು, ಕೆಲವು ಮುಸ್ಲಿಂ ಮಂಗಳಮುಖಿ ಸದಸ್ಯರು, ಹಿಂದೂ ಮಂಗಳಮುಖಿ ವ್ಯಕ್ತಿಗಳನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಲು ಒತ್ತಾಯಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಇಸ್ಲಾಂಗೆ ಮತಾಂತರವಾಗಲಿಲ್ಲ ಎಂದು ತಮಗೆ ಹೆಚ್ಐವಿ ಚುಚ್ಚುಮದ್ದು ಚುಚ್ಚಿದ್ದಾರೆ ಎಂದು ಹಿಂದೂ ಮಂಗಳಮುಖಿಯರು ಆರೋಪಿಸಿ ದೂರು ಕೂಡ ನೀಡಿದ್ದಾರೆ.
ಇಸ್ಲಾಂ ಸ್ವೀಕರಿಸದಿದ್ದರೆ ಸಮಾಜದಿಂದ ಬಹಿಷ್ಕಾರ
ಇನ್ನು ಮುಸ್ಲಿಂ ಮಂಗಳಮುಖಿಯರು ಹಿಂದೂ ಮಂಗಳಮುಖಿಯರು ಮತಾಂತರವಾಗದಿದ್ದರೆ ಅವರನ್ನು ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಪೂಜೆಗಳನ್ನು ನೆರವೇರಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೆಸರು ಬಹಿರಂಗ ಪಡಿಸದ ಹಿಂದೂ ಮಂಗಳಮುಖಿಯೊಬ್ಬರು ಆರೋಪಿಸಿದ್ದಾರೆ.
ಏನಿದು ವಿಲಕ್ಷಣ ಪ್ರಕರಣ?
ಮೂಲಗಳ ಪ್ರಕಾರ ಮಲೆಗಾಂವಿನ ಪಾಯಲ್ ಎನಿಸಿಕೊಂಡ ನಯೀಮ್ ಅನ್ಸಾರಿ ಮತ್ತು ಸೀಮಾ ಹಾಜಿ ಎಂಬ ಹೆಸರಿನಲ್ಲಿ ಗುರುತಿಸಲಾದ ಫರ್ಜಾನಾ ಈ ಮತಾಂತರ ಚಟುವಟಿಕೆಗೆ ಮುಂದಾಳತ್ವ ವಹಿಸಿದ್ದರು ಎನ್ನಲಾಗಿದೆ. ಹಿಂದೂ ಮಂಗಳಮುಖಿಯರನ್ನು ಪುಸಲಾಯಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಅವರಿಗೆ ಹೆಚ್ ಐವಿ ಸೋಂಕಿತ ಚುಚ್ಚುಮದ್ದು ಚುಚ್ಚಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯಿಂದಾಗಿ ಸುಮಾರು 60ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಲ್ಲಿ 12 ಮಂದಿ ಇಂದೋರ್ನ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿ ART ಕೇಂದ್ರದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಇಂದಾಗಲೇ ವಿಜಯ್ ನಗರ ಮತ್ತು ಚಂದನ್ ನಗರ ಪೊಲೀಸ್ ಠಾಣೆಗಳಲ್ಲಿ ದೈಹಿಕ ದಾಳಿ, ಅಪಹರಣ ಮತ್ತು ಬೆದರಿಕೆ ಸಂಬಂಧಿತ ಹಲವಾರು ದೂರುಗಳು ದಾಖಲಾಗಿವೆ. ಸಂತ್ರಸ್ಥೆ ಸಕೀನಾ ಗುರು ಅವರು ಮಾಹಿತಿ ನೀಡಿದಂತೆ, ಅವರ ಗುಂಪಿನ ಹಲವರು ಈಗಾಗಲೇ ಭಯದಿಂದಾಗಿ ಇಂದೋರ್ ನಗರವನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ತನಿಖೆ
ಈ ಆರೋಪಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಮಧ್ಯಪ್ರದೇಶದಲ್ಲಿ ವ್ಯಾಪಕ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಅಲ್ಲದೆ ಇದಕ್ಕಾಗಿ ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ಅವರು ಈ ಪ್ರಕರಣದ ಗಂಭೀರತೆ ಗಮನಿಸಿ, ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ತನಿಖಾ ತಂಡದಲ್ಲಿ DCP ರಿಷಿಕೇಶ್ ಮೀನಾ, ಡಿಷೆಸ್ ಅಗರವಾಲ್, IPS ಅಧಿಕಾರಿ ಆದಿತ್ಯ ಪಟೇಲ್ ಮತ್ತು ACP ಹೇಮಂತ್ ಚೌಹಾನ್ ಸೇರಿದ್ದಾರೆ.
ಮಂಗಳಮುಖಿಯರ Colonyಗೆ ತೆರಳಲು ಸಾಧ್ಯವಾಗದೇ ವಾಪಸ್ ಆದ ಪೊಲೀಸರು
ಇನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆಗಾಗಿ ಇಂದೋರ್ ನ ಮಂಗಳಮುಖಿಯರ ಕಾಲನಿಗೆ ತೆರಳಿದಾಗ ಅಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಪೊಲೀಸರು ಈ ಆರೋಪಿಗಳನ್ನು ಬಂಧಿಸಲು ತಲುಪಿದಾಗ, ಪೊಲೀಸರಿಗೆ ಒಳಗೆ ಹೋಗಲು ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸರು ಬರಿಗೈಯಲ್ಲೇ ವಾಪಸ್ ಆಗಿದ್ದಾರೆ.
ಈ ಘಟನೆ ಬಗ್ಗೆ ಸಿಜೆಐ, ಪಿಎಂಒ, ಸಿಎಂಒ, ಡಿಎಂ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗುತ್ತಿದೆ. ಈ ವಿಷಯದ ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತಾಂತರ ಯತ್ನ ಮೊದಲೇನಲ್ಲ..
ಇನ್ನು ಇಂದೋರ್ ನ ಮಂಗಳಮುಖಿಯರ ಕಾಲನಿಯಲ್ಲಿ ಮತಾಂತರ ಘಟನೆ ಇದೇ ಮೊದಲೇನಲ್ಲ.. ಈ ಹಿಂದೆಯೂ ಸಾಕಷ್ಟು ಬಾರಿ ಮುಸ್ಲಿಂ ಮಂಗಳಮುಖಿಯರು ಹಿಂದೂ ಮಂಗಳಮುಖಿಯರಿಗೆ ಇಂತಹ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಇಂದೋರ್ ಮಧ್ಯ ಪ್ರದೇಶ ಮಾತ್ರವಲ್ಲದೇ ಛತ್ತೀಸ್ಗಢ, ಉತ್ತರ ಪ್ರದೇಶ, ಹರಿಯಾಣ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.
Advertisement