'ಸಮಾಜವಾದ', 'ಜಾತ್ಯತೀತತೆ' ತೆಗೆದುಹಾಕುವ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ

ಸಂವಿಧಾನದ ಪೀಠಿಕೆಯಿಂದ ಎರಡು ಪದಗಳನ್ನು ತೆಗೆದುಹಾಕಲು ಸರ್ಕಾರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಪ್ರಕ್ರಿಯೆಯನ್ನು 'ಔಪಚಾರಿಕವಾಗಿ' ಪ್ರಾರಂಭಿಸಿಲ್ಲ ಎಂದು ಸದನಕ್ಕೆ ತಿಳಿಸಲಾಗಿದೆ.
Constitution preamble
ಸಂವಿಧಾನ ಪ್ರತಿonline desk
Updated on

ನವದೆಹಲಿ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೇರಿಸಲಾದ 'ಸಮಾಜವಾದ' ಮತ್ತು 'ಜಾತ್ಯತೀತತೆ' ಪದಗಳನ್ನು ಸಂವಿಧಾನದ ಪೀಠಿಕೆಯಿಂದ ಮರುಪರಿಶೀಲಿಸುವ ಅಥವಾ ತೆಗೆದುಹಾಕುವ 'ಪ್ರಸ್ತುತ ಯೋಜನೆ ಅಥವಾ ಉದ್ದೇಶ'ದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರಕ್ಕೆ ಇಂತಹ ಯಾವುದೇ ಯೋಜನೆ, ಉದ್ದೇಶ ಇಲ್ಲ ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಗಿದೆ. ಸಂವಿಧಾನದ ಪೀಠಿಕೆಯಿಂದ ಎರಡು ಪದಗಳನ್ನು ತೆಗೆದುಹಾಕಲು ಸರ್ಕಾರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಪ್ರಕ್ರಿಯೆಯನ್ನು 'ಔಪಚಾರಿಕವಾಗಿ' ಪ್ರಾರಂಭಿಸಿಲ್ಲ ಎಂದು ಸದನಕ್ಕೆ ತಿಳಿಸಲಾಗಿದೆ.

ಕೆಲವು ಸಾರ್ವಜನಿಕ ಅಥವಾ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಅಥವಾ ಅಭಿಪ್ರಾಯಗಳು ಇರಬಹುದು, ಆದರೆ ಈ ಪದಗಳಿಗೆ ತಿದ್ದುಪಡಿಗಳ ಕುರಿತು 'ಸರ್ಕಾರದಿಂದ ಯಾವುದೇ ಔಪಚಾರಿಕ ನಿರ್ಧಾರ ಅಥವಾ ಪ್ರಸ್ತಾವನೆಯನ್ನು ಘೋಷಿಸಲಾಗಿಲ್ಲ' ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

"ಸಂವಿಧಾನದ ಪೀಠಿಕೆಯಿಂದ 'ಸಮಾಜವಾದ' ಮತ್ತು 'ಜಾತ್ಯತೀತತೆ' ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಪ್ರಸ್ತುತ ಯೋಜನೆ ಅಥವಾ ಉದ್ದೇಶವಿಲ್ಲ ಎಂಬುದು ಸರ್ಕಾರದ ಅಧಿಕೃತ ನಿಲುವು. ಪೀಠಿಕೆಗೆ ತಿದ್ದುಪಡಿಗಳ ಕುರಿತು ಯಾವುದೇ ಚರ್ಚೆಗಳಿಗೆ ಸಂಪೂರ್ಣ, ವಿಶಾಲ ಒಮ್ಮತದ ಅಗತ್ಯವಿರುತ್ತದೆ, ಆದರೆ ಇಲ್ಲಿಯವರೆಗೆ, ಈ ನಿಬಂಧನೆಗಳನ್ನು ಬದಲಾಯಿಸಲು ಸರ್ಕಾರ ಯಾವುದೇ ಔಪಚಾರಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ" ಎಂದು ಸಚಿವರು ತಿಳಿಸಿದ್ದಾರೆ.

ನವೆಂಬರ್ 2024 ರಲ್ಲಿ, ಸುಪ್ರೀಂ ಕೋರ್ಟ್ 1976 ರ ತಿದ್ದುಪಡಿಯನ್ನು (42 ನೇ ಸಾಂವಿಧಾನಿಕ ತಿದ್ದುಪಡಿ) ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸಿದೆ ಎಂದು ಸಚಿವರು ಹೇಳಿದ್ದಾರೆ. ಕೆಲವು ಸಾಮಾಜಿಕ ಸಂಸ್ಥೆಗಳ ಪದಾಧಿಕಾರಿಗಳು ಸೃಷ್ಟಿಸಿದ ವಾತಾವರಣದ ಬಗ್ಗೆ, ಕೆಲವು ಗುಂಪುಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರಬಹುದು ಅಥವಾ ಈ ಪದಗಳ ಮರುಪರಿಶೀಲನೆಗೆ ಪ್ರತಿಪಾದಿಸುತ್ತಿರಬಹುದು ಎಂದು ಮೇಘವಾಲ್ ಹೇಳಿದ್ದಾರೆ.

Constitution preamble
ಸಂವಿಧಾನದಿಂದ 'ಜಾತ್ಯತೀತತೆ - ಸಮಾಜವಾದ' ಕೈ ಬಿಡಬೇಕು: ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ CM ಪ್ರತಿಕ್ರಿಯೆ

"ಅಂತಹ ಚಟುವಟಿಕೆಗಳು ವಿಷಯದ ಸುತ್ತ ಸಾರ್ವಜನಿಕ ಚರ್ಚೆ ಅಥವಾ ವಾತಾವರಣವನ್ನು ಸೃಷ್ಟಿಸಬಹುದು, ಆದರೆ ಇದು ಸರ್ಕಾರದ ಅಧಿಕೃತ ನಿಲುವು ಅಥವಾ ಕ್ರಮಗಳನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು, ಆಗಿನ ಉಪಾಧ್ಯಕ್ಷ ಜಗದೀಪ್ ಧನ್ಕರ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ತಿದ್ದುಪಡಿಯ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾದ ಪದಗಳು 'ಕೊಳೆಯುವ ಗಾಯ' ಎಂದು ಪ್ರತಿಪಾದಿಸಿದ್ದರು, ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ನಾಯಕರೊಬ್ಬರು 'ಜಾತ್ಯತೀತ' ಮತ್ತು 'ಸಮಾಜವಾದಿ' ಎಂಬ ಹೆಚ್ಚುವರಿ ಪದಗಳ ಪರಿಶೀಲನೆಗೆ ನೀಡಿದ ಕರೆಗೆ ಧ್ವನಿಗೂಡಿಸುವ ಹೇಳಿಕೆಗಳಾಗಿತ್ತು.

ಭಾರತದ ಮೂಲಭೂತ ಮೌಲ್ಯಗಳನ್ನು ವ್ಯಾಖ್ಯಾನಿಸಲು 'ಜಾತ್ಯತೀತ' ಮತ್ತು 'ಸಮಾಜವಾದಿ' ಎಂಬ ಪದಗಳು ಪೀಠಿಕೆಯಲ್ಲಿ ಉಳಿಯಬೇಕೇ ಎಂಬುದರ ಕುರಿತು ರಾಷ್ಟ್ರೀಯ ಚರ್ಚೆಗೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕರೆ ನೀಡಿದ ನಂತರ ಉಂಟಾದ ರಾಜಕೀಯ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಧನ್ಕರ್, ಪೀಠಿಕೆ ಪವಿತ್ರವಾದದ್ದು ಮತ್ತು 'ಬದಲಾಯಿಸಲಾಗದ್ದು' ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com