
ಉತ್ತರ ಪ್ರದೇಶದ ಮುಜಫರ್ ನಗರ ಜಿಲ್ಲೆಯಲ್ಲಿ ಮರ್ಯಾದೆಯ ಹೆಸರಿನಲ್ಲಿ ನಡೆದ ಕೊಲೆಯ ಸಂಚಲನಕಾರಿ ಪ್ರಕರಣ ಬೆಳಕಿಗೆ ಬಂದಿದೆ. ತಂದೆ ಮತ್ತು ಮಗ ಸೇರಿಕೊಂಡು ತಮ್ಮ 23 ವರ್ಷದ ಮಗಳು ಸರಸ್ವತಿಯನ್ನು ಕೊಂದಿದ್ದಾರೆ. ಘಟನೆಯ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಮೇ 30ರ ರಾತ್ರಿ ಘಟನೆ ನಡೆದಿದೆ. ಕಾಕರ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕಟಿಯಾ ಗ್ರಾಮದ ನಿವಾಸಿ ಸರಸ್ವತಿಯನ್ನು ಮೊದಲು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ನಂತರ ದೇಹವನ್ನು ಸುಡಲು ಬೈಕ್ ನಿಂದ ಪೆಟ್ರೋಲ್ ತೆಗೆದು ಕಾಡಿಗೆ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದ್ದಾರೆ.
ಜೂನ್ 3ರಂದು ಪೊಲೀಸರಿಗೆ ಕಾಡಿನಲ್ಲಿ ಯುವತಿಯ ಸುಟ್ಟ ಶವ ಪತ್ತೆಯಾಗಿತ್ತು. ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಗುರುತಿಸುವುದು ಕಷ್ಟಕರವಾಗಿತ್ತು. ಆದರೆ ಪೊಲೀಸ್ ತಂಡದ ಕಾನ್ಸ್ಟೆಬಲ್ಗಳಾದ ಜೋಗಿಂದರ್ ಮತ್ತು ಲಲಿತ್, ಇನ್ಸ್ಟಾಗ್ರಾಮ್ ಮತ್ತು ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ಹುಡುಗಿಯನ್ನು ಗುರುತಿಸಿದರು. ಕೈಯಲ್ಲಿ ಧರಿಸಿದ್ದ ಬಳೆಯಿಂದ ಶವವನ್ನು ಸರಸ್ವತಿ ಎಂದು ಗುರುತಿಸಲಾಗಿದೆ.
ಪೊಲೀಸರು ಕುಟುಂಬವನ್ನು ತೀವ್ರವಾಗಿ ವಿಚಾರಿಸಿದಾಗ, ಸರಸ್ವತಿಯ ತಂದೆ ರಾಜ್ವೀರ್ ಮತ್ತು ಸಹೋದರ ಸುಮಿತ್ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ಸರಸ್ವತಿಗೆ ಹಲವರ ಜೊತೆ ಪ್ರೇಮ ಸಂಬಂಧವಿತ್ತು. ಅಲ್ಲದೆ ಆಕೆ 2019 ಮತ್ತು 2022ರಲ್ಲಿ ಎರಡು ಬಾರಿ ವಿವಾಹವಾಗಿದ್ದರು. ಆ ಎರಡು ಮದುವೆಯೂ ಮುರಿದುಬಿದ್ದಿತ್ತು. ನಂತರ ಆಕೆಯ ಪೋಷಕರ ನಿರ್ಧಾರಕ್ಕೆ ವಿರುದ್ಧವಾಗಿ ಸರಸ್ವತಿ ಲವರ್ ಜೊತೆ ಲಿವಿಂಗ್ ನಲ್ಲಿದ್ದಳು.
ಪೊಲೀಸರು ರಾಜ್ವೀರ್ ಮತ್ತು ಸುಮಿತ್ ಅವರನ್ನು ಬಂಧಿಸಿ, ಸೆಕ್ಷನ್ 103 (1) ಮತ್ತು 238 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಜೈಲಿಗೆ ಕಳುಹಿಸಿದರು. ಪ್ರಕರಣದ ಮತ್ತೊಬ್ಬ ಆರೋಪಿ ಗುರುದಯಾಳ್ ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ. ಕಗ್ಗಂಟಾಗಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಎಸ್ಎಸ್ಪಿ ಸಂಜಯ್ ಕುಮಾರ್ ವರ್ಮಾ 15,000 ರೂ. ಬಹುಮಾನ ಘೋಷಿಸಿದ್ದಾರೆ.
Advertisement