ಇರಾನ್ನಿಂದ ಸ್ಥಳಾಂತರ: ಜಮ್ಮು ಕಾಶ್ಮೀರದ 90 ವಿದ್ಯಾರ್ಥಿಗಳು ದೆಹಲಿಗೆ ಆಗಮನ; ಸಾರಿಗೆ ವ್ಯವಸ್ಥೆ ಬಗ್ಗೆ ಅಸಮಾಧಾನ
ಶ್ರೀನಗರ: ಯುದ್ಧ ಪೀಡಿತ ಇರಾನ್ನಿಂದ ಸ್ಥಳಾಂತರಿಸಲಾದ 110 ಭಾರತೀಯ ಪ್ರಜೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ(ಜೆ & ಕೆ) ಸುಮಾರು 90 ವಿದ್ಯಾರ್ಥಿಗಳು ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಸುರಕ್ಷಿತ ಸ್ಥಳಾಂತರಿಸುವಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಆದರೆ ಅವರಿಗೆ ಒದಗಿಸಲಾದ ಸಾರಿಗೆ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಬೇರೆ ವ್ಯವಸ್ಥೆ ಮಾಡಲು ಕಾರಣವಾಯಿತು.
ದೆಹಲಿ ತಲುಪಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಇತರ ರಾಜ್ಯಗಳ ವಿದ್ಯಾರ್ಥಿಗಳಂತೆ ವಿಮಾನ ನಿಲ್ದಾಣದಿಂದ ಸಾರಿಗೆ ಸೌಲಭ್ಯ ಒದಗಿಸಿಲ್ಲ. ಅವರಿಗೆ ಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಸೂಚಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರಯಾಣದಿಂದ ಅವರು ದಣಿದಿದ್ದಾರೆ. ಇದು ತೀವ್ರ ನಿರಾಶಾದಾಯಕವಾಗಿದೆ" ಎಂದು ಜೆ & ಕೆ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹೇಮಿ ಅವರು ಹೇಳಿದ್ದಾರೆ.
ಬಳಿಕ ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ದೆಹಲಿಯಿಂದ ಕೇಂದ್ರಾಡಳಿತ ಪ್ರದೇಶಕ್ಕೆ ವಿದ್ಯಾರ್ಥಿಗಳನ್ನು ಡಿಲಕ್ಸ್ ಬಸ್ಗಳಲ್ಲಿ ಕರೆದೊಯ್ಯಲಾಗುವುದು ಎಂದು ಘೋಷಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಕಚೇರಿ, ವಿದ್ಯಾರ್ಥಿಗಳನ್ನು ಸಾಗಿಸಲು ಜಮ್ಮು ಮತ್ತು ಕಾಶ್ಮೀರ ರಸ್ತೆ ಸಾರಿಗೆ ನಿಗಮದ ಡಿಲಕ್ಸ್ ಬಸ್ಗಳ ವ್ಯವಸ್ಥೆ ಮಾಡಲು ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
"ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾದ ಬಸ್ಗಳ ಗುಣಮಟ್ಟದ ಕುರಿತು ಇರಾನ್ನಿಂದ ಸ್ಥಳಾಂತರಿಸಲಾದ ವಿದ್ಯಾರ್ಥಿಗಳ ವಿನಂತಿಯನ್ನು ಮುಖ್ಯಮಂತ್ರಿ ಗಮನಿಸಿದ್ದಾರೆ" ಎಂದು ಕಚೇರಿ ತಿಳಿಸಿದೆ.
"ಸರಿಯಾದ ಡಿಲಕ್ಸ್ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಆಯುಕ್ತರಿಗೆ ಜೆಕೆಆರ್ಟಿಸಿಯೊಂದಿಗೆ ಸಮನ್ವಯ ಸಾಧಿಸುವ ಕಾರ್ಯವನ್ನು ವಹಿಸಲಾಗಿದೆ" ಎಂದು ಸಿಎಂ ಕಚೇರಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಕನಿಷ್ಠ 1,300 ವಿದ್ಯಾರ್ಥಿಗಳು ಇರಾನ್ನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ