
ಅಹಮದಾಬಾದ್: ಗುಜರಾತ್ ಉಪಚುನಾವಣೆಯಲ್ಲಿ ಎಎಪಿಯ ಗೋಪಾಲ್ ಇಟಾಲಿಯಾ ಗೆಲುವು ಸಾಧಿಸಿದ ಕೆಲವು ದಿನಗಳ ನಂತರ, ಪಕ್ಷವು ಆಂತರಿಕ ಭಿನ್ನಾಭಿಪ್ರಾಯದಿಂದ ನಲುಗಿದೆ. ಇನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೊಟಾಡ್ ಶಾಸಕ ಉಮೇಶ್ ಮಕ್ವಾನಾ ಅವರನ್ನು ಇಂದು ಐದು ವರ್ಷಗಳ ಕಾಲ ಉಚ್ಚಾಟಿಸಲಾಯಿತು. ಮಕ್ವಾನಾ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ಪಕ್ಷದ ಸಮರ್ಪಿತ ಕಾರ್ಯಕರ್ತನಾಗಿ ಉಳಿಯುವುದಾಗಿ ಹೇಳಿದ ಕೆಲವೇ ಗಂಟೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಗುಜರಾತ್ ಎಎಪಿ (AAP) ಮುಖ್ಯಸ್ಥ ಇಸುದನ್ ಗಧ್ವಿ ಅವರು ಉಚ್ಚಾಟನೆಯನ್ನು ಘೋಷಿಸಿದ್ದು, ಇದು ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪ್ರತಿಬಿಂಬಿಸುತ್ತದೆ. ತಮ್ಮ ವಿದಾಯ ಹೇಳಿಕೆಯಲ್ಲಿ ಮಕ್ವಾನಾ, ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು. ಪ್ರಚಾರದ ಸಮಯದಲ್ಲಿ ತಮ್ಮನ್ನು ಕೈಬಿಡಲಾಗಿತ್ತು. ಅಲ್ಲದೆ ಕಾಡಿ ವಿಧಾನಸಭೆಯಲ್ಲಿ ದಲಿತ ಅಭ್ಯರ್ಥಿಯೊಬ್ಬರನ್ನು ಕ್ಷೇತ್ರದಲ್ಲಿ ಏಕಾಂಗಿಯಾಗಿಸಲಾಗಿತ್ತು ಎಂದು ಆರೋಪಿಸಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರೊಂದಿಗೆ ಸಮಾಲೋಚಿಸಿದ ನಂತರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನಾನು ನಿರ್ಧರಿಸುತ್ತೇನೆ. ಒಂದು ವೇಳೆ ನಾನು ರಾಜೀನಾಮೆ ನೀಡಿದರೆ, ಸ್ವತಂತ್ರವಾಗಿ ಸ್ಪರ್ಧಿಸಬೇಕೆ ಅಥವಾ ಹೊಸ ಪಕ್ಷವನ್ನು ಪ್ರಾರಂಭಿಸಬೇಕೆ ಎಂದು ಶೀಘ್ರದಲ್ಲೇ ನಿರ್ಧರಿಸುತ್ತೇನೆ ಎಂದು ಉಮೇಶ್ ಮಕ್ವಾನಾ ಹೇಳಿದರು.
ಹಿಂದುಳಿದ ಸಮುದಾಯಗಳ ನಾಯಕರನ್ನು ಚುನಾವಣೆಗೆ ಮಾತ್ರ ಬಳಸಲಾಗುತ್ತಿದೆ. ಪ್ರತಿಯೊಂದು ಪಕ್ಷವು ತಮ್ಮ ನಿಜವಾದ ಸಮಸ್ಯೆಗಳನ್ನು ಎತ್ತುವಲ್ಲಿ ವಿಫಲವಾಗಿದೆ. ಎಲ್ಲಾ ಪಕ್ಷಗಳಲ್ಲಿ ಜಾತಿವಾದಿ ಮನಸ್ಥಿತಿಗಳು ಬೆಳೆಯುತ್ತಿವೆ. ಎಎಪಿಯ ರಾಷ್ಟ್ರೀಯ ರಚನೆಯಲ್ಲೂ ಕೆಲಸ ಮಾಡಿದ್ದ ಮಕ್ವಾನಾ ಅವರು, ಎಎಪಿಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದಿದ್ದೇನೆ. ಆದರೆ ತಳಮಟ್ಟದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು.
2022ರ ವಿಧಾನಸಭಾ ಚುನಾವಣೆಯಲ್ಲಿ ಉಮೇಶ್ ಮಕ್ವಾನಾ ಅವರು ಬಿಜೆಪಿಯ ಘನಶ್ಯಾಮ್ ವಿರಾನಿ ಅವರನ್ನು 2,779 ಮತಗಳ ಅಲ್ಪ ಅಂತರದಿಂದ ಸೋಲಿಸುವ ಮೂಲಕ ಎಲ್ಲರ ಗಮನ ಸೆಳೆದರು. ಉಮೇಶ್ ಮಕ್ವಾನಾ ಅವರು ಆಮ್ ಆದ್ಮಿ ಪಕ್ಷದಲ್ಲಿ ಕೋಲಿ ನಾಯಕರಾಗಿ ಹೊರಹೊಮ್ಮುತ್ತಿದ್ದರು. ಇದರಿಂದಾಗಿ ಪಕ್ಷವು ಕೋಲಿ ಸಮುದಾಯ ಸೇರಿದಂತೆ ಒಬಿಸಿ ಸಮುದಾಯದ ಮತದಾರರನ್ನು ಆಕರ್ಷಿಸಲು 2022ರ ಲೋಕಸಭಾ ಚುನಾವಣೆಯಲ್ಲಿ ಭಾವನಗರ ಸ್ಥಾನದಿಂದ ಉಮೇಶ್ ಮಕ್ವಾನಾ ಅವರಿಗೆ ಟಿಕೆಟ್ ನೀಡಿತು. ಇದರಲ್ಲಿ, ಬಿಜೆಪಿಯ ನಿಮುಬೆನ್ ಬಂಭಾನಿಯಾ ಅವರು ಉಮೇಶ್ ಮಕ್ವಾನಾ ಅವರನ್ನು 4,55,289 ಮತಗಳಿಂದ ಸೋಲಿಸಿದರು.
Advertisement