
ನವದೆಹಲಿ: ಬಾಂಗ್ಲಾದೇಶದ ಜೈಲಿನಿಂದ ಹಿಂಸಾತ್ಮಕ ಉಗ್ರರ ಬಿಡುಗಡೆಯ ಬಗ್ಗೆ ಭಾರತ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದು, ಹಿಂದೂಗಳು, ಇತರ ಅಲ್ಪಸಂಖ್ಯಾತರು ಮತ್ತು ಅವರ ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವುದು ಮಧ್ಯಂತರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದೆ.
ಬಾಂಗ್ಲಾದೇಶದ ಆಂತರಿಕ ಪರಿಸ್ಥಿತಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ನಾವು ಸ್ಥಿರ, ಶಾಂತಿಯುತ, ಅಂತರ್ಗತ ಮತ್ತು ಪ್ರಗತಿಪರ ಬಾಂಗ್ಲಾದೇಶವನ್ನು ಬೆಂಬಲಿಸುತ್ತೇವೆ. ಇದರಲ್ಲಿ ಎಲ್ಲಾ ಸಮಸ್ಯೆಗಳನ್ನು ಪ್ರಜಾಪ್ರಭುತ್ವ ವಿಧಾನ ಮತ್ತು ಎಲ್ಲರನ್ನೂ ಒಳಗೊಳುವ ಚುನಾವಣೆ ನಡೆಸುವ ಮೂಲಕ ಪರಿಹರಿಸಲಾಗುತ್ತದೆ ಎಂದು ಹೇಳಿದರು.
ಗಂಭೀರ ಅಪರಾಧಗಳಿಗಾಗಿ ಶಿಕ್ಷೆಗೆ ಗುರಿಯಾದ ಹಿಂಸಾತ್ಮಕ ಉಗ್ರರ ಬಿಡುಗಡೆಯಿಂದ ಮತ್ತಷ್ಟು ಉಲ್ಬಣಗೊಳ್ಳುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಭಾರತ ಕಳವಳಗೊಂಡಿದೆ. ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತರು, ಅವರ ಆಸ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವುದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಜವಾಬ್ದಾರಿ ಎಂದು ನಾವು ಪದೇ ಪದೇ ಒತ್ತಿಹೇಳಿದ್ದೇವೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತು ಮಾತನಾಡಿದ ವಕ್ತಾರರು, ಆಗಸ್ಟ್ 5, 2024 ರಿಂದ ಫೆಬ್ರವರಿ 16, 2025 ರವರೆಗೆ ವರದಿಯಾದ 2,374 ಕ್ಕೂ ಹೆಚ್ಚು ಘಟನೆಗಳಲ್ಲಿ 1,254 ಘಟನೆಗಳನ್ನು ಮಾತ್ರ ಪೊಲೀಸರು ಪರಿಶೀಲಿಸಿದ್ದಾರೆ. "ಇದಲ್ಲದೆ, ಈ 1,254 ಘಟನೆಗಳಲ್ಲಿ ಶೇ.98 ರಷ್ಟು ರಾಜಕೀಯ ಸ್ವರೂಪದವೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಬಾಂಗ್ಲಾದೇಶ ತನಿಖೆ ನಡೆಸಿ ಹತ್ಯೆಕೋರರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.
ಬಾಂಗ್ಲಾದೇಶದ ಜನರೊಂದಿಗಿನ ನಮ್ಮ ಸಂಬಂಧಗಳಲ್ಲಿ ಸಹಕಾರವು ನಮ್ಮ ಆದ್ಯತೆಯಾಗಿದೆ. ಇತ್ತೀಚಿನ ಭದ್ರತಾ ಪರಿಸ್ಥಿತಿ ಮತ್ತು ದೀರ್ಘಕಾಲದ ಸ್ಥಳೀಯ ಸಮಸ್ಯೆಗಳು ಈ ಕೆಲವು ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
Advertisement