ಮೊದಲ ರಾತ್ರಿ ಮೊಬೈಲ್ ಗೆ ಬಂತು ಸಂದೇಶ: ಪತ್ನಿಯ ಕತ್ತು ಹಿಸುಕಿ ಕೊಂದು ವರ ನೇಣಿಗೆ ಶರಣು!
ಅಯೋಧ್ಯೆ: ಮದುವೆಯ ರಾತ್ರಿ ವಧು-ವರರ ಸಾವಿನ ಪ್ರಕರಣದಲ್ಲಿ ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ. ಮದುವೆಯ ರಾತ್ರಿ 11:45ರ ನಂತರ ಮೊಬೈಲ್ ಫೋನ್ಗೆ ಒಂದು ಸಂದೇಶ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಸಂದೇಶವನ್ನು ಓದಿದ ನಂತರ, ಪತಿ ಮತ್ತು ಪತ್ನಿ ನಡುವೆ ಸುಮಾರು ಒಂದು ಗಂಟೆಗಳ ಕಾಲ ಜಗಳ ನಡೆದು, ನಂತರ ಪತಿ ತನ್ನ ಪತ್ನಿ ಕತ್ತು ಹಿಸುಕಿ ಕೊಂದಿದ್ದಾನೆ. ಇದಾದ ನಂತರ ವರ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಮನಗರಿ ಅಯೋಧ್ಯೆಯ ಸಹದತ್ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಮತ್ತು ಶಿವಾನಿ ಕಳೆದ ಶುಕ್ರವಾರ ಮದುವೆಯಾಗಿದ್ದರು. ಮೊದಲ ರಾತ್ರಿ ಇಬ್ಬರನ್ನು ಕೋಣೆಗೆ ಕಳುಹಿಸಿದ್ದರು. ಆದರೆ, ಬೆಳಿಗ್ಗೆ ಬಹಳ ಹೊತ್ತು ಆದರೂ ಇಬ್ಬರೂ ಕೋಣೆಯಿಂದ ಹೊರಗೆ ಬಾರದಿದ್ದಾಗ, ಕುಟುಂಬ ಸದಸ್ಯರು ಚಿಂತಿತರಾದರು. ಜೋರಾಗಿ ಕೂಗಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಜನರು ಕಿಟಕಿಯ ಮೂಲಕ ಒಳಗೆ ಇಣುಕಿದರು.
ಒಳಗಿನ ದೃಶ್ಯ ನೋಡಿ ಕುಟುಂಬ ಸದಸ್ಯರು ಆಘಾತಕ್ಕೊಳಗಾದರು. ಶಿವಾನಿ ಹಾಸಿಗೆಯ ಮೇಲೆ ಬಿದ್ದಿದ್ದಳು. ಇನ್ನು ಪ್ರದೀಪ್ ಫ್ಯಾನ್ ಗೆ ನೇತಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಇಬ್ಬರ ಶವಗಳನ್ನು ಹೊರತೆಗೆದರು.
ಸಿಟಿ ಸಿಒ ಶೈಲೇಂದ್ರ ಕುಮಾರ್ ಅವರ ಪ್ರಕಾರ, ಪತಿ ಪ್ರದೀಪ್ ಅವರ ಮೊಬೈಲ್ಗೆ ಅವರೇ ತಮ್ಮ ಇನ್ನೊಂದು ಸಂಖ್ಯೆಯಿಂದ ಸಂದೇಶ ಕಳುಹಿಸಿದ್ದಾರೆ. ಸಂದೇಶಗಳ ಮೂಲಕ ಅವನು ತನ್ನ ಪತ್ನಿ ಶಿವಾನಿಯ ಹಳೆಯ ಸಂಬಂಧಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದನೆಂದು ಶಂಕಿಸಲಾಗಿದೆ. ಆದರೆ, ಪತ್ನಿ ಶಿವಾನಿ ತನ್ನ ಹೆತ್ತವರ ಮನೆಯಲ್ಲೇ ಮೊಬೈಲ್ ಬಿಟ್ಟುಬಂದಿದ್ದಾಳೆ.
ಈ ಮಧ್ಯೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವಿವಾದ ಎಷ್ಟು ಉಲ್ಬಣಗೊಂಡಿತೆಂದರೆ ಪ್ರದೀಪ್ ತನ್ನ ಹೆಂಡತಿಯನ್ನು ಕೊಂದು ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಿವಾನಿಯ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಈ ಗುರುತುಗಳು ಉಗುರುಗಳಿಂದ ಬಂದಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ