
ನವದೆಹಲಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಶೇ. 4 ರಷ್ಟು ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಬಿಜೆಪಿ 'ಅಸಂವಿಧಾನಿಕ ದುಸ್ಸಾಹಸ' ಎಂದು ಕರೆದಿದೆ. ಈ ಕ್ರಮದ ವಿರುದ್ಧ ಹೋರಾಟ ನಡೆಸುತ್ತೇವೆ. ಅಲ್ಲದೆ ನ್ಯಾಯಾಲಯದಲ್ಲಿಯೂ ಪ್ರಶ್ನಿಸುತ್ತೇವೆ ಎಂದು ಹೇಳಿದೆ.
ಕಳೆದ ವಾರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (KTPP) ಕಾಯ್ದೆಗೆ ತಿದ್ದುಪಡಿಯನ್ನು ಸಚಿವ ಸಂಪುಟ ಅನುಮೋದಿಸಿತ್ತು. ಇದು 2 ಕೋಟಿ ರೂ.ವರೆಗಿನ (ಸಿವಿಲ್) ಕೆಲಸಗಳಲ್ಲಿನ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮತ್ತು 1 ಕೋಟಿ ರೂ.ವರೆಗಿನ ಸರಕು/ಸೇವೆಗಳ ಒಪ್ಪಂದಗಳಲ್ಲೂ ಶೇಕಡ 4ರಷ್ಟು ಮೀಸಲಿಟ್ಟಿದೆ.
ಈ ಪ್ರಸ್ತಾವನೆಯನ್ನು ಅಸಂವಿಧಾನಿಕ ಕ್ರಮ ಎಂದು ಬಿಜೆಪಿ ದೃಢವಾಗಿ ವಿರೋಧಿಸುತ್ತಿದೆ. ಅಲ್ಲದೆ ಸಿದ್ದರಾಮಯ್ಯ ಸರ್ಕಾರವು ಪ್ರಸ್ತಾವಿತ ಅಸಂವಿಧಾನಿಕ ದುಸ್ಸಾಹಸವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ನಿರ್ಧಾರವು ಮುಸ್ಲಿಮರನ್ನು ಸಮಾಧಾನಪಡಿಸಲು "ಯೋಜಿತ ನಡೆ" ಎಂದು ಅವರು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿಶೇಷವಾಗಿ ರಾಹುಲ್ ಗಾಂಧಿ ನಿರ್ದೇಶನ ಮತ್ತು ಪ್ರೋತ್ಸಾಹವಿದೆ ಎಂದು ಆರೋಪಿಸಿದರು. ಈ ಅಸಂವಿಧಾನಿಕ ಕಾನೂನುಬಾಹಿರ ಕೃತ್ಯವನ್ನು ಪ್ರಾಥಮಿಕವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಅಲ್ಲದೆ ಸಂಸತ್ತಿನಲ್ಲಿಯೂ ಈ ವಿಷಯವನ್ನು ಪ್ರಶ್ನಿಸಲಿದ್ದು ಸಂಸತ್ತಿನ ಹೊರಗೆ ಇದರ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಸೂರ್ಯ ಹೇಳಿದರು.
Advertisement